ತಿರುಪತಿ ದೇವಾಲಯದ ಕೆಲ ಆದಾಯಕ್ಕೆ ಜಿಎಸ್ ಟಿಯಿಂದ ವಿನಾಯಿತಿ
ಹೈದರಾಬಾದ್, ಜೂನ್ 20: ತಿರುಪತಿ ವೆಂಕಟೇಶ್ವರನ ಲಡ್ಡು ಪ್ರಸಾದಕ್ಕೆ ಜಿಎಸ್ ಟಿಯಿಂದ ವಿನಾಯಿತಿ ಸಿಕ್ಕಿದೆ. ಲಡ್ಡು ತಯಾರಿಸಲು ಬಳಸುವ ಸರಕು, ಪೂಜೆ ಸಾಮಗ್ರಿ, ಅತಿಥಿಗೃಹ-ಛತ್ರಗಳಲ್ಲಿ ಉಳಿದುಕೊಳ್ಳುವ ಭಕ್ತರಿಗೆ ನೀಡುವ ಸೇವೆ ಮತ್ತಿತರ ವರಮಾನದ ಮೂಲಗಳಿಗೆ ವಿನಾಯಿತಿ ನೀಡಲು ಕೇಳಿಕೊಳ್ಳಲಾಗಿತ್ತು ಎಂದು ಆಂಧ್ರ ಹಣಕಾಸು ಸಚಿವ ವೈ.ರಾಮಕೃಷ್ಣುಡು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಕಡಿಮೆ ಬಾಡಿಗೆಯ ಕೋಣೆಗಳು ಹಾಗೂ ದೇವರಿಗೆ ಹರಕೆ ಒಪ್ಪಿಸುವಾಗ ಸಂಗ್ರಹ ಆಗುವ ತಲೆಗೂದಲಿನ ವರಮಾನಕ್ಕೂ ವಿನಾಯಿತಿ ಸಿಕ್ಕಿದೆ. ಟ್ರಸ್ಟ್ ನಿಂದ ಇನ್ನಷ್ಟು ಮನವಿಗಳನ್ನು ಮಾಡಲಾಗಿತ್ತು. ಇತರ ದೇವಸ್ಥಾನದವರೂ ಕೇಳುತ್ತಾರೆ ಎಂಬ ಕಾರಣಕ್ಕೆ ಎಲ್ಲ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ತಿರುಪತಿಯ ವೆಂಕಟೇಶ್ವರನ ಪ್ರಸಾದ ತಯಾರಿಕೆಗೆ ಪ್ರತಿ ವರ್ಷ ಆಗುವ ಖರ್ಚು ನೂರಾ ಅರವತ್ತು ಕೋಟಿ ರುಪಾಯಿ. ಇನ್ನು ಉಚಿತ ಅನ್ನ ಪ್ರಸಾದಕ್ಕೆ ಆಗುವ ಖರ್ಚು ಎಂಬತ್ತು ಕೋಟಿ, ಸಕ್ಕರೆ-ಕಡಲೇಬೇಳೆಗೆ ಐವತ್ತು ಕೋಟಿ, ಅಕ್ಕಿಗೆ ಮೂವತ್ತು ಕೋಟಿ, ಗೋಡಂಬಿಗೆ ಅರವತ್ತು ಕೋಟಿ, ಕಡಿಮೆ ದರದಲ್ಲಿ ಲಡ್ಡು ಮಾರುವುದರಿಂದ ಇನ್ನೂರೈವತ್ತು ಕೋಟಿ ರುಪಾಯಿ ನಷ್ಟವಾಗುತ್ತದೆ.

ವಾರ್ಷಿಕ ಮೂರು ಸಾವಿರ ಕೋಟಿ ಬಜೆಟ್
ತಿರುಪತಿ ತಿರುಮಲ ದೇವಸ್ಥಾನದ ವಾರ್ಷಿಕ ಬಜೆಟ್ ಮೂರು ಸಾವಿರ ಕೋಟಿ ರುಪಾಯಿ. ಹುಂಡಿಯ ಆದಾಯವೇ ಕಳೆದ ವರ್ಷ ಸಾವಿರದ ಮೂವತ್ತೆಂಟು ಕೋಟಿ ರುಪಾಯಿ ಇದೆ.

ಒಂದು ಕೋಟಿ ಲಾಡು ಮಾರಾಟ
ಏಪ್ರಿಲ್ ಇಪ್ಪತ್ತೆಂಟು ಹಾಗೂ ಜೂನ್ ಹದಿಮೂರರ ಮಧ್ಯೆ ಅಂದರೆ ಇದರಲ್ಲಿ ಬೇಸಿಗೆ ರಜಾ ಅವಧಿಯಾದ್ದರಿಂದ ಒಂದು ಕೋಟಿ ಲಾಡು ಮಾರಾಟವಾಗಿದೆ.

ನಲವತ್ತೊಂದು ಲಕ್ಷ ಭಕ್ತರು ಭೇಟಿ
ಇನ್ನು ಬೇಸಿಗೆ ಅವಧಿಯಲ್ಲಿ ತಿರುಪತಿ ತಿರುಮಲದ ವೆಂಕಟೇಶ್ವರನ ದರ್ಶನಕ್ಕೆ ನಲವತ್ತೊಂದು ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

ನೂರಾ ಅರವತ್ತು ಕೋಟಿ ರುಪಾಯಿ ಸರಕು ಖರೀದಿ
ವಾರ್ಷಿಕ ನೂರಾ ಅರವತ್ತು ಕೋಟಿ ರುಪಾಯಿಯನ್ನು ಸರಕುಗಳ ಖರೀದಿಗೆ ವೆಚ್ಚ ಮಾಡಲಾಗುತ್ತದೆ. ಆ ಪೈಕಿ ಬಹುಮುಖ್ಯ ಪಾಲು ತುಪ್ಪಕ್ಕಾಗಿ ಆಗುತ್ತದೆ.












Click it and Unblock the Notifications