ತೃತೀಯ ರಂಗದ ಕನಸು ಹೊತ್ತ ಕೆಸಿಆರ್ ಗೆ ಭಾರೀ ಮುಖಭಂಗ ಮಾಡಿದ ಸ್ಟಾಲಿನ್
ಹೈದರಾಬಾದ್, ಮೇ 08: ತೃತೀಯ ರಂಗದ ಕನಸು ಹೊತ್ತು ಓಡಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಭಾರೀ ಮುಖಭಂಗವಾಗಿದೆ! 'ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ' ಎನ್ನುವ ಹಾಗೆ ಯಾವುದೋ ಒಂದು ನೆಪ ಹೇಳಿ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರ ಭೇಟಿಗೆ ಒಲ್ಲೆ ಎಂದಿದ್ದಾರೆ.
ಈಗಾಗಲೇ ಟಿಆರ್ ಎಸ್ ಮುಖಂಡ ಕೆಸಿಆರ್ ಅವರು ಕರ್ನಾಟಕ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ತೃತೀಯ ರಂಗದ ಕುರಿತು ಮಾತುಕತೆ ನಡೆಸಿದ್ದರು. ಜೊತೆಗೆ ಕೇರಳ ಮುಖ್ಯಮಂತ್ರಿ, ಸಿಪಿಐಎಂ ನಾಯಕ ಪುಣರಾಯಿ ವಿಜಯನ್ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಮೇ 13 ರಂದು ಕೆಸಿಆರ್ ಸ್ಟಾಲಿನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ ತಾವು ಚುನಾವಣೆ ಕೆಲಸದಲ್ಲಿ 'ಬ್ಯುಸಿ' ಎನ್ನುವ ಮೂಲಕ ಎಂಕೆ ಸ್ಟಾಲಿನ್ 'ತೃತೀಯ ರಂಗ'ಕ್ಕೆ ತಮ್ಮ ಬೆಂಬಲವಿಲ್ಲ ಎಂದು ಪರೋಕ್ಷ ಸೂಚನೆ ನೀಡಿದ್ದಾರೆ.

ಬಿಜೆಪಿ-ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗದ ಸರ್ಕಾರ ರಚಿಸುವ ಅವರ ಪ್ರಯತ್ನಕ್ಕೆ ಎಂಕೆ ಸ್ಟಾಲಿನ್ ನಡೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಆದರೆ ಎಂಕೆ ಸ್ಟಾಲಿನ್ ಈಗಾಗಲೇ ಮಹಾಘಟಬಂಧನಕ್ಕೆ ತಮ್ಮ ಬೆಂಬಲ ಘೋಷಿಸಿದ್ದು, ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಸೃಷ್ಟಿಯಾಗಿ, ಉಭಯ ಪಕ್ಷಗಳೂ ಒಂದಾಗಿ ಚುನಾವಣೆ ಎದುರಿಸುತ್ತಿವೆ. ರಾಹುಲ್ ಗಾಂಧಿ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ಸ್ಟಾಲಿನ್ ಈಗಾಗಲೇ ಹೇಳಿದ್ದಾರೆ. ಆದ್ದರಿಂದ ತೃತೀಯ ರಂಗಕ್ಕೆ ತಮ್ಮ ಬೆಂಬಲವಿಲ್ಲ ಎಂದು ಅವರು ಪರೋಕ್ಷ ಸೂಚನೆ ನೀಡಿದ್ದಾರೆ.












Click it and Unblock the Notifications