ಜನಸೇನಾ: ಮಾಜಿ ಐಎಎಸ್ ಅಧಿಕಾರಿ ಸೇರಿದಂತೆ 32 ಅಭ್ಯರ್ಥಿಗಳು ಕಣಕ್ಕೆ
ಹೈದರಾಬಾದ್, ಮಾರ್ಚ್ 18: ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಂಧ್ರಪ್ರದೇಶದ ವಿಧಾನಸಭೆಗಾಗಿ 32 ಅಭ್ಯರ್ಥಿಗಳು ಹಾಗೂ 4 ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದ್ದು, ತೆಲಂಗಾಣದ ಒಂದು ಲೋಕಸಭಾ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಸೂಚಿಸಲಾಗಿದೆ.
ಒಂದು ವರ್ಷದ ಹಿಂದೆ ಕಾಂಗ್ರೆಸ್ ತೊರೆದು ಜನ ಸೇನಾ ಸೇರಿದ ನದೆಂದ್ಲಾ ಮನೋಹರ್ ಅವರಿಗೆ ತೆನಾಲಿ ಟಿಕೆಟ್ ಸಿಕ್ಕಿದೆ. ಮಾಜಿ ಐಎಎಸ್ ಅಧಿಕಾರಿ ತೋಟಾ ಚಂದ್ರಶೇಖರ್ ಅವರಿಗೆ ಗುಂಟೂರು ಪಶ್ಚಿಮದಿಂದ ಸ್ಪರ್ಧಿಸಲು ಸೂಚಿಸಲಾಗಿದೆ.

ಭಾರತೀಯ ರೈಲ್ವೆಯ ಮಾಜಿ ಅಧಿಕಾರಿ ಡಾ. ಭರತ್ ಭೂಷಣ್ ಅವರಿಗೆ ವೇಮೂರು ಅಸೆಂಬ್ಲಿ ಟಿಕೆಟ್, ಟಿಡಿಪಿ ತೊರೆದ ಸಚಿವ ರವೆಲಾ ಕಿಶೋರ್ ಬಾಬು ಅವರಿಗೆ ಪ್ರಥಿಪಾಡು ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಯುವಜನ್ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿಯ ಪರವಾಗಿ ಗೆದೆಲಾ ಶ್ರೀನು ಬಾಬು ಅವರಿಗೆ ವಿಶಾಖಪಟ್ಟಣಂ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
ಆಂಧ್ರಪ್ರದೇಶದ 175 ವಿಧಾನಸಭಾ ಸ್ಥಾನ ಹಾಗೂ 25 ಸಂಸತ್ ಸ್ಥಾನಗಳಿಗೆ ಏಪ್ರಿಲ್ 11ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ. ಆಂಧ್ರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಹಾಗೂ ಜನಸೇನಾ ಪಕ್ಷದ ನಡುವೆ ಚುನಾವಣಾ ಪೂರ್ವ ಮೈತ್ರಿಯನ್ನು ಘೋಷಿಸಲಾಗಿದೆ. ಜಂಟಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿವೆ.












Click it and Unblock the Notifications