ಮೈತ್ರಿಗಾಗಿ ಕಾಲಹರಣ: ನಾಯ್ಡು-ಕೆಸಿಆರ್ ಗೆ ಬಿಜೆಪಿ ತಪರಾಕಿ
ಹೈದರಾಬಾದ್, ಜನವರಿ 17: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಬ್ಬರೂ 'ಮೈತ್ರಿಕೂಟ' ವೆನ್ನುತ್ತ ಕಾಲಹರಣ ಮಾಡುತ್ತಿದ್ದರೆ, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸು ಕಾರ್ಯತಂತ್ರ ರೂಪಿಸಿದೆ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್ ಅಣಕಿಸಿದ್ದಾರೆ.
'ಮೋದಿ ಮತ್ತೊಮ್ಮೆ' ಎಂಬ ಘೋಷ ವಾಕ್ಯದೊಂದಿಗೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಕೆಸಿಆರ್ ಅಥವಾ ಚಂದ್ರಬಾಬು ನಾಯ್ಡು ಅವರು ರಚಿಸುವ ಮೈತ್ರಿಕೂಟ ಖಂಡಿತ ವಿಫಲವಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸಂಯುಕ್ತ ಕೂಟ ರಚಿಸಲು ಕೆಸಿಆರ್ ಮುಂದಾಗಿದ್ದರೆ, ಕಾಂಗ್ರೆಸ್ ಮುಂದಾಳತ್ವದಲ್ಲೇ ವಿಪಕ್ಷಗಳನ್ನೆಲ್ಲ ಒಗ್ಗೂಡಿಸಿ ಮಹಾಘಟಬಂಧನ ರಚಿಸಲು ನಾಯ್ಡು ಮುಂದಾಗಿದ್ದಾರೆ.
ಆದರೆ ಕಾಂಗ್ರೆಸ್ ಮಹಾಘಟಬಂಧನದ ಭಾಗವಾದರೆ ತಾನು ಇದರಿಂದ ಹೊರಗುಳಿಯುತ್ತೇನೆಂದಿದ್ದ ಬಿ ಎಸ್ಪಿ ನಾಯಕಿ ಮಾಯಾವತಿ ಅವರನ್ನು ಕೆಸಿಆರ್ ಈಗಾಗಲೇ ಭೇಟಿಯಾಗಿ ಸಂಯುಕ್ತ ರಂಗದಲ್ಲಿ ಭಾಗಿಯಾಗುವ ಆಫರ್ ನೀಡಿದ್ದಾರೆ. ಅತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಆಫರ್ ನೀಡಲಾಗಿದೆ.

"ಆದರೆ ತೆಲಂಗಾಣದ ಜನರು ಮೋದಿ ಅವರನ್ನೇ ಮತ್ತೆ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ" ಎಂದು ಲಕ್ಷ್ಮಣ್ ಹೇಳಿದ್ದು, ಮತ್ತೊಮ್ಮೆ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications