ಹೈದರಾಬಾದ್: ಪತ್ನಿಯನ್ನು ಕೊಂದು ದುಬೈಗೆ ಹಾರಿದ್ದ ಪತಿ ಬಂಧನ
ಹೈದರಾಬಾದ್, ಜುಲೈ 05: ಪತ್ನಿಯನ್ನು ಕೊಂದು ದುಬೈಗೆ ಪರಾರಿಯಾಗಿದ್ದ ವ್ಯಕ್ತಿಯೊಬ್ಬನನ್ನು ರಾಯಭಾರ ಕಚೇರಿಯ ನೆರವಿನಿಂದ ಪೊಲೀಸರು ಬಂಧಿಸಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಮೇ ತಿಂಗಳಿನಲ್ಲಿ ಅಕ್ಬರ್ ಅಲಿ ಖಾನ್ ಎಂಬಾತ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಪತ್ನಿಯ ಮೇಲೆ ಸಂಶಯ ಹೊಂದಿದ್ದ ಈತ ತನ್ನ ತಾಯಿಯ ನೆರವಿನಿಂದ ಪತ್ನಿಯನ್ನೇ ಕೊಲೆ ಮಾಡಿದ್ದ. ನಂತರ ಆಕೆಯ ಮೃತದೇಹವನ್ನು ಚೀಲವೊಂದರಲ್ಲಿ ಪಾರ್ಸೆಲ್ ನಂತೆ ತುಂಬಿ ರಸ್ತೆಯ ಬದಿಯಲ್ಲಿ ಬಿಸಾಡಿದ್ದ.
ದೆಹಲಿ ಸಾಮೂಹಿಕ ಆತ್ಮಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟಕ ಮಾಹಿತಿ
ಘಟನೆಯ ನಂತರ ಪೊಲೀಸರ ಭಯಕ್ಕೆ ದುಬೈಗೆ ಪರಾರಿಯಾಗಿದ್ದ. ಆತ ದುಬೈಗೆ ಹಾರಿದ್ದರಿಂದಲೇ ಪೊಲೀಸರಿಗೆ ಆತನ ಮೇಲೆ ಮತ್ತಷ್ಟು ಅನುಮಾನ ಹುಟ್ಟಿತ್ತು. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆತನನ್ನು ಭಾರತಕ್ಕೆ ವಾಪಸ್ ಕರೆಸಿ, ಹೈದರಾಬಾದಿನಲ್ಲಿ ಬಂಧಿಸಲಾಗಿದೆ.
ಸಾಕ್ಷ್ಯ ನಾಶಕ್ಕೆ ನೆರವು ನೀಡಿ, ಆರೋಪಿಗೆ ವಿಮಾನ ಟಿಕೆಟ್ ಖರೀದಿಸಿಕೊಟ್ಟು ಪರಾರಿಯಾಗುವುದಕ್ಕೆ ಸಹಾಯ ಮಾಡಿದ ಆರೋಪಿಯ ತಾಯಿ ಸೇರಿದಂತೆ ಮೂವರು ಕುಟುಂಬಸ್ಥರನ್ನು ಸಹ ಪೊಲೀಸರು ಬಂಧಿಸಿದ್ದಾರೆ.