ಲಂಡನ್ನಿನಲ್ಲಿ ಹೈದರಾಬಾದ್ ಯುವಕನ ಹತ್ಯೆ, ಸುಷ್ಮಾ ನೆರವು ಬೇಡಿದ ಕುಟುಂಬ
ಹೈದರಾಬಾದ್, ಮೇ 10: ಲಂಡನ್ನಿನಲ್ಲಿ ವಾಸವಿದ್ದ ಮೊಹ್ದ್ ನದೀಮುದ್ದಿನ್ ಎಂಬ ಯುಕನನ್ನು ಲಂಡನ್ನಿನಲ್ಲಿ ಅಪರಿಚಿತನೊಬ್ಬ ಇರಿದು ಕೊಂದಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.
ಲಂಡನ್ನಿನ ಟೆಸ್ಕೋ ಸೂಪರ್ ಮಾರ್ಕೆಟ್ ನ ಮಾಲ್ ವೊಂದರಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನದೀಮುದ್ದಿನ್ ನನ್ನು ಬುಧವಾರ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ್ದು ಏಷ್ಯಾದ ವ್ಯಕ್ತಿಯೇ ಎಂದು ನದೀಮುದ್ದಿನ್ ಸ್ನೇಹಿತ ಫಹೀಮ್ ಖುರೇಶಿ ಹೇಳಿದ್ದಾರೆ.
ನದೀಮುದ್ದಿನ್ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ, ಆತನೊಂದಿಗೆ ವಾಸವಿದ್ದ ಸ್ನೇಹಿತರು ಆತನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಾಗ ಆತಂಕಗೊಂದು ಸೂಪರ್ ಮಾರ್ಕೆಟಿಗೆ ಫೋನಾಯಿಸಿದ್ದಾರೆ. ಆಗ ಮಾಲ್ ನ ಪಾರ್ಕಿಂಗ್ ಲಾಟ್ ನಲ್ಲಿ ಆತ ಮೃತನಾಗಿರುವುದು ತಿಳಿದುಬಂದಿದೆ.

ಇದೀಗ ನದೀಮುದ್ದಿನ್ ನ ಅಂತಿಮ ದರ್ಶನಕ್ಕಾಗಿ ಆತನ ಕುಟುಂಬ ಹೈದರಾಬಾದಿನಿಂದ ಲಂಡನ್ನಿಗೆ ತೆರಳುತ್ತಿದ್ದು, ಅದಕ್ಕಾಗಿ ನೆರವು ನೀಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಬೇಡಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇತ್ತೀಚೆಗಷ್ಟೇ ದುಬೈಯಲ್ಲಿ ಕೆಲಸಕ್ಕೆಂದು ತೆರಳಿ ಮಾಲೀಕರಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ಹೈದರಾಬಾದಿನ ಯುವಕನೊಬ್ಬನನ್ನು ವಿದೇಶಾಂಗ ಇಲಾಖೆ ರಕ್ಷಿಸಿತ್ತು. ಅದಕ್ಕಾಗಿ ಆತ 'ಸುಷ್ಮಾ ಸ್ವರಾಜ್ ಅವರಿಗೆ ಋಣಿ' ಎಂದಿದ್ದರು.












Click it and Unblock the Notifications