ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು
ಹೈದರಾಬಾದ್, ಸೆಪ್ಟೆಂಬರ್, 08 : ಅರಳುವ ಹೂಗಳು ದುಃಖದಲ್ಲಿ, ನೋವಿನಲ್ಲಿ ಮೀಯುತ್ತಿವೆ. ಈ ಹೂಗಳು ಅರಳಿ ನಿಂತು ಚಂದದ ನಗೆ ಬೀರೋಣವೆಂದು ಅಣಿಯಾಗುವ ಹೊತ್ತಿಗೆ ಜೀವನದ ಕಗ್ಗತ್ತಲು ಇವುಗಳನ್ನು ಬೆದರಿಸಿ ಕಮರುವಂತೆ ಮಾಡಿದೆ. ಇದರಿಂದ ಭಯಭೀತವಾದ ಹೂಗಳು ಹೆತ್ತವರನ್ನು ಬಾಚಿ ತಬ್ಬಿ ಅಪ್ಪುಗೆ ಸುಖ ಪಡೆಯೋಣ ಎಂದು ಓಡಿದರೆ ಆ ಎರಡು ಮಡಿಲುಗಳು ಕಾಣದ ಲೋಕದಲ್ಲಿ ಕಣ್ಮರೆಯಾಗಿವೆ
ಹೌದು ಇದುವರೆಗೂ ನಾ ಹೇಳಿದ್ದು, ತಂದೆ ತಾಯಿಯನ್ನು ಕಳೆದುಕೊಂಡು ಹೆತ್ತವರ ಅಕ್ಕರೆ, ಪ್ರೀತಿ, ವಾತ್ಸಲ್ಯ, ಮಮತೆ, ಕೈತುತ್ತು, ಲಾಲಿ ಹಾಡು, ಆರೈಕೆಗಳಿಂದ ದೂರವಾಗಿ ಅನಾಥಪ್ರಜ್ಞೆಯ ಮಡುವಿನಲ್ಲಿರುವ ಇಬ್ಬರು ಬಾಲಕರ ಬಗ್ಗೆ.[ಮೂರು ವರ್ಷದ ಹಸುಳೆ ಆಯ್ಲನ್ ಕುರ್ದಿ Rest In Peace]
12 ವರ್ಷದವರಾದ ವಿನೋದ್ ಮತ್ತು ಅವನ ತಮ್ಮ ನವೀನ್ ಮೂಲತಃ ಹೈದರಾಬಾದಿನ ತೆಲಂಗಾಣದ ಮೇಧಕ್ ಜಿಲ್ಲೆಯವರು. ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಬಡತನದಲ್ಲೂ ಸಂತಸ ಕಾಣುತ್ತಾ ಜೀವನ ನಡೆಸುತ್ತಿದ್ದ ಈ ಇಬ್ಬರು ಮಕ್ಕಳ ತಾಯಿಯೇ ಲಕ್ಷ್ಮೀ.
ತಂದೆ ಬಾಲನರಸಯ್ಯ ಹತ್ತಿ ಬೆಳೆಗಾರನಾಗಿದ್ದು, ಹೆಚ್ಚು ಮದ್ಯ ವ್ಯಸನಿಯಾಗಿದ್ದನು. ಹತ್ತಿ ಬೆಳೆಗಳ ಉಳಿಕೆಗಾಗಿ ಒಂದುವರೆ ಎಕರೆ ಭೂಮಿ ಮೇಲೆ 3 ಲಕ್ಷ ಸಾಲ ಮಾಡಿದ್ದನು. ಕುಡುಕ ಗಂಡನ ಜೊತೆಯಲ್ಲೇ ಏಗುತ್ತಲೇ ಜೀವನ ಸಾಗಿಸುತ್ತಾ ತನ್ನ ಮಕ್ಕಳ ಭವಿಷ್ಯದ ಕುರಿತಾಗಿ ಚಿಂತೆ ಮಾಡಿದ ತಾಯಿ ಇದ್ದಕ್ಕಿದ್ದ ಹಾಗೆ ಅನಾರೋಗ್ಯಕ್ಕೆ ತುತ್ತಾದಳು.
ಕುಡುಗ ಗಂಡನ ಬಗ್ಗೆ ಭರವಸೆ ಕಳೆದುಕೊಂಡ ಈಕೆ ಕೊನೆಗೆ ತನ್ನ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ಬಾಲಕಾರ್ಮಿಕತನ ಮೈಗೆ ಅಂಟಿಕೊಳ್ಳುವಂತೆ ಮಾಡಿದರೂ ಮಕ್ಕಳಿಗೆ ಸ್ವಾಭಿಮಾನದ ಬದುಕನ್ನು ನಡೆಸುವಂತೆ ಪ್ರೇರೇಪಿಸಿದಳು.
ಮಕ್ಕಳ ಚಿಂತೆಯಲ್ಲಿ ತೊಡಗಿದ ಲಕ್ಷ್ಮೀಯ ಆರೋಗ್ಯದಲ್ಲಿ ತೀರಾ ವ್ಯತ್ಯಾಸವಾಗಿ ಕಳೆದ ವರ್ಷ ಸಾವನ್ನಪ್ಪಿದ್ದಳು. ಲಕ್ಷ್ಮೀಯ ಸಾವಿನಿಂದ ತೀರಾ ಪಶ್ಚಾತ್ತಾಪ ಪಟ್ಟ ಬಾಲನರಸಯ್ಯ ವಿಷ ಸೇವಿಸಿ ಪ್ರಾಣ ಕಳೆದುಕೊಂಡರು. ಇದೀಗ ಈ ಇಬ್ಬರು ಪುಟಾಣಿಗಳು ಅನಾಥರು.
ನನ್ನ ತಂದೆ ಕೇವಲ ಸಾಲಕ್ಕೆ ಹೆದರಿ ವಿಷ ಸೇವಿಸಿ ಸಾವನ್ನಪ್ಪಿದರೇ? ಎಂದು ಕೇಳುವ ವಿನೋದ್ ' ನನ್ನ ತಂದೆ ಪ್ರಾಣವನ್ನಪ್ಪುವ ವೇಳೆಗೆ ಕೊನೆಗೆ ಆಡಿದ್ದು 'ಕ್ಷಮಿಸು' ಎಂಬ ಪದ ಮಾತ್ರ ಎಂದು ತೀರಾ ಭಾವುಕನಾಗುತ್ತಾನೆ. ಬಹಳಷ್ಟು ಕಣ್ಣೀರುಗರೆಯುತ್ತಾನೆ.
ಕೊನೆಗೆ ತಾಯಿಯ ಬದುಕನ್ನು ಮಾದರಿಯಾಗಿರಿಸಿಕೊಂಡ ಈ ಇಬ್ಬರು ಮಕ್ಕಳು ' ಅಮ್ಮ ನಮ್ಮೊಂದಿಗೆ ಜೀವಂತವಾಗಿದ್ದಾಳೆ. ಅವಳು ನಮಗಾಗಿ ತನ್ನ ಬದುಕನ್ನು ಸವೆಸಿದ್ದಾಳೆ. ಸ್ವಾಭಿಮಾನದ ಬದುಕನ್ನು ಕಲಿಸಿದ್ದಾಳೆ. ನಮ್ಮನ್ನು ನಾವು ನಿಭಾಯಿಸಿಕೊಂಡು ಬದುಕಬಲ್ಲೆವು ಎಂಬ ಭರವಸೆ ನಮ್ಮಲ್ಲಿ ಮೂಡಿದೆ ಎಂದು ಬಹಳ ಸ್ವಾಭಿಮಾನದಿಂದಲೇ ನುಡಿಯುತ್ತಾರೆ ಈ 12 ವರ್ಷದ ಬಾಲಕರು.