ಸಿಕಂದರಾಬಾದ್ನಲ್ಲಿ ಬೆಂಕಿ ಹಚ್ಚಿದ ರೈಲಿನಿಂದ ಬಚಾವ್ ಆಗಿದ್ದು ಹೇಗೆ 40 ಪ್ರಯಾಣಿಕರು!?
ಹೈದ್ರಾಬಾದ್, ಜೂನ್ 17: ತೆಲಂಗಾಣದಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವ ಅಗ್ನಿಪಥ್ ಯೋಜನೆ ವಿರುದ್ಧ ಆಕ್ರೋಶದ ಜ್ವಾಲೆಗೆ ಒಬ್ಬ ವ್ಯಕ್ತಿ ಪ್ರಾಣ ಬಿಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಿಕಂದರಾಬಾದ್ ನಗರದಲ್ಲಿ ನಡೆದ ಹಿಂಸಾಚಾರ ವಿರೋಪಕ್ಕೆ ತಿರುಗಿದ್ದು, ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಮಧ್ಯೆ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿರುವುದೇ ರಣರೋಚಕವಾಗಿದೆ.
ಸಿಕಂದರಾಬಾದ್ನ ರೈಲು ನಿಲ್ದಾಣಕ್ಕೆ ಏಕಾಏಕಿ 5000ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ನುಗ್ಗಿದರು. ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲಿನ ಕೋಚ್ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಈ ವೇಳೆ ಮಕ್ಕಳು ಸೇರಿದಂತೆ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಯಿತು. ರೈಲ್ವೆ ಸಿಬ್ಬಂದಿಯು ತೋರಿದ ಸಮಯಪ್ರಜ್ಞೆ ಮತ್ತು ಸಮಯೋಚಿತ ಕ್ರಮದಿಂದಾಗಿ 40 ಮಂದಿಯನ್ನು ಪಕ್ಕದ ರೈಲ್ವೆ ಕೋಚ್ಗೆ ಸ್ಥಳಾಂತರಿಸಲಾಯಿತು.
ಅಗ್ನಿಪಥ್ ವಿರುದ್ಧ ಪ್ರತಿಭಟನೆ ನಡೆಸುತ್ತಾ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಜನರು ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡು ಬಂದಿದ್ದರು. ಈ ಪ್ರತಿಭಟನಾಕಾರರು ದಾಳಿ ನಡೆಸಿದ ಸಂದರ್ಭದಲ್ಲಿ ಎ1 ಕೋಚ್ನೊಳಗೆ ಕನಿಷ್ಠ 40 ಪ್ರಯಾಣಿಕರಿದ್ದರು ಎಂದು ಎಸಿ ಪವರ್ ಕಾರ್ ಮೆಕ್ಯಾನಿಕ್ ಆಗಿರುವ ಸುಮನ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

40 ಜನರಿದ್ದ ರೈಲಿನ ಕೋಚ್ಗೆ ಬೆಂಕಿ
"ಇಲ್ಲಿನ ರೈಲ್ವೆ ಕೋಚ್ನೊಳಗಿನ ಸುಮಾರು 40 ಪ್ರಯಾಣಿಕರಿದ್ದರು, ಈ ವೇಳೆ 5000ಕ್ಕೂ ಹೆಚ್ಚು ಜನರು ರೈಲ್ವೆ ನಿಲ್ದಾಣಕ್ಕೆ ನುಗ್ಗಿದರು. ಅದರಲ್ಲಿ ಅಪರಾಧ ಮಾಡಿದವರು ಯಾರು ಎಂಬುದನ್ನು ಗುರುತಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇದರ ಮಧ್ಯೆ ಪ್ರತಿಭಟನಾಕಾರರು ಕೋಚ್ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು, ಆದರೆ ಸಿಬ್ಬಂದಿಯ ಸಮಯೋಚಿತ ಕ್ರಮವು ಅದನ್ನು ಉಳಿಸಿತು ಎಂದು ಸುಮನ್ ಕುಮಾರ್ ಶರ್ಮಾ ಹೇಳಿದರು.
ಹಿಂಸಾಚಾರದ ನಡುವೆ ಪ್ರಯಾಣಿಕರನ್ನು ಕೋಚ್ನಿಂದ ಹೊರಕ್ಕೆ ಹೇಗೆ ಸ್ಥಳಾಂತರಿಸಲಾಯಿತು ಎಂಬುದನ್ನು ಶರ್ಮಾ ವಿವರಿಸಿದರು. "ಎರಡು ಗೇಟ್ಗಳು ತೆರೆದಿದ್ದವು, ಆದ್ದರಿಂದ ನಾವು ಪ್ರಯಾಣಿಕರನ್ನು ಒಂದು ಕಡೆಯಿಂದ ಹೊರ ಹೋಗುವುದಕ್ಕೆ ಬಿಟ್ಟೆವು, ರೈಲ್ವೆ ಪೊಲೀಸರು ನಿಮ್ಮನ್ನು ಸುರಕ್ಷಿತವಾಗಿ ರಕ್ಷಿಸುತ್ತದೆ ಎಂಬುದನ್ನು ನಾವು ಅವರಿಗೆ ತಿಳಿಸಿದ್ದೆವು," ಎಂದರು.

35 ರೈಲುಗಳನ್ನು ರದ್ದುಗೊಳಿಸಿದ ರೈಲ್ವೆ ಇಲಾಖೆ
ಕಳೆದ ಬುಧವಾರದಿಂದಲೂ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಶುರುವಾದಾಗಿದೆ. ಅಂದಿನಿಂದ ಇಂದಿನವರೆಗೂ 200ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಿದೆ. 35 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಮಾಹಿತಿ ನೀಡಿದೆ.

7 ರಾಜ್ಯಗಳಲ್ಲಿ ಹಿಂಸಾತ್ಮಕ ರೂಪಕ್ಕೆ ತಿರುಗಿನ ಪ್ರತಿಭಟನೆ
ಹೊಸ ಸೇನಾ ನೇಮಕಾತಿ ನೀತಿ ಅಗ್ನಿಪಥ್ಗೆ ಸಂಬಂಧಿಸಿದಂತೆ 7 ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಸರ್ಕಾರದ ಹೊಸ ನೀತಿ ವಿರುದ್ಧ ಕೆರಳಿರುವ ಜನಸಮೂಹ ರೈಲುಗಳಿಗೆ ಬೆಂಕಿ ಹಚ್ಚಿತು. ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ಮಾಡಲಾಗಿದ್ದು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಇಂದೋರ್ ವರೆಗೆ ಸಶಸ್ತ್ರ ಪಡೆಗಳಲ್ಲಿ ಉದ್ಯೋಗಕ್ಕಾಗಿ ನೂರಾರು ಯುವ ಆಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹೊಸ ನೇಮಕಾತಿ ನೀತಿಯ ವಿರುದ್ಧ ರೈಲ್ವೆ ಹಳಿಗಳನ್ನು ತಡೆದು, ರಸ್ತೆಗಳಲ್ಲಿ ಟೈರ್ಗಳನ್ನು ಸುಡುವ ಮೂಲಕ ಆಕ್ರೋಶ ಹೊರ ಹಾಕಿದರು.

ಅಗ್ನಿಪಥ್ ಯೋಜನೆ ಬಗ್ಗೆ ತಿಳಿಯಬೇಕಾಗಿದ್ದು ಏನು?
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.












Click it and Unblock the Notifications