ದೃಶ್ಯಸಹಿತ ವರದಿ:ಹೈದ್ರಾಬಾದ್ ನಲ್ಲಿ ಮಳೆ ಸೃಷ್ಟಿಸಿದ ಅವಾಂತರದ ಚಿತ್ರಣ
ಹೈದ್ರಾಬಾದ್, ಅಕ್ಟೋಬರ್.18: ತೆಲಂಗಾಣ ರಾಜಧಾನಿ ಹೈದ್ರಾಬಾದ್ ನಲ್ಲಿ ಎರಡನೇ ದಿನವೂ ವರುಣನ ಅಟ್ಟಹಾಸ ಮುಂದುವರಿದಿದೆ. ಶನಿವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಜನರ ಬದುಕು ಮುಳುಗಡೆ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವರುಣನ ರೌದ್ರನರ್ತನಕ್ಕೆ ಮತ್ತೆರೆಡು ಜೀವಗಳು ಬಲಿಯಾಗಿವೆ.
ಹೈದ್ರಾಬಾದ್ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ತೆಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗುರ್ರಾಮ್ ಚೆರುವು ಅಕಾ ಬಾಲಾಪುರ ಕೆರೆಯ ಕಟ್ಟೆ ಒಡೆದಿದ್ದು, ಬಾಬಾ ನಗರದ ಬಿ-ಬ್ಲಾಕ್ನಲ್ಲಿ ಮಳೆಯ ನೀರು ಹರಿಯುತ್ತಿದೆ. ಅಲ್ಲದೇ, ಹಫೀಜ್ ಬಾಬಾ ನಗರ, ಒಮರ್ ಕಾಲೋನಿ ನಬೀಲ್ ಕಾಲೋನಿ ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.
ಪ್ರವಾಹದಂಥಾ ಮಳೆಗೆ ಸಿಲುಕಿ ತೆಲಂಗಾಣದಲ್ಲಿ 30 ಮಂದಿ ಸಾವು
ಶನಿವಾರದಿಂದ ಪ್ರಾರಂಭವಾದ ಮಳೆಗೆ ಹೈದರಾಬಾದಿನ ಮಲಕ್ ಪೇಟ್ ನಲ್ಲಿ 50 ವರ್ಷದ ವ್ಯಕ್ತಿಯೊಬ್ಬ ವಿದ್ಯುತ್ ಸ್ಪರ್ಶದಿಂದ ಪ್ರಾಣ ಬಿಟ್ಟಿದ್ದರೆ, ನಗರದ ಆರ್ಕೆ ಪಿಇಟಿ ಪ್ರದೇಶದಲ್ಲಿ ಗೋಡೆ ಕುಸಿದು ಐದು ವರ್ಷದ ಮಗು ಸಾವನ್ನಪ್ಪಿರುವುದು ಗೊತ್ತಾಗಿದೆ. ತೆಲಂಗಾಣದಲ್ಲಿ ಇದುವರೆಗೂ ಸುರಿದ ಮಳೆಗೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
|
ತೆಗ್ಗು ಪ್ರದೇಶದ ನಿವಾಸಿಗಳ ಸ್ಥಳಾಂತರ
ಹೈದ್ರಾಬಾದ್ ನಲ್ಲಿ ತೆಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಹೆಚ್ಚಾದ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಅಂಜನಿ ಕುಮಾರ್ ತಿಳಿಸಿದ್ದಾರೆ. ಹಫೀಜ್ ಬಾಬಾ ನಗರ್, ಫೂಲ್ಬಾಗ್, ಉಮರ್ ಕಾಲೋನಿ, ಇಂದಿರಾ ನಗರ್, ಶಿವಾಜಿ ನಗರ್, ರಾಜೀವ್ ನಗರ್ ನಿವಾಸಿಗಳನ್ನು ಪೊಲೀಸರ ಸಹಾಯದಿಂದ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
|
ತೆಲಂಗಾಣದಲ್ಲಿ 157.3 ಎಂಎಂ ಮಳೆ
ಮೆಡಚಾಲ್ ಮಲ್ಕಾಜಗಿರಿ ಜಿಲ್ಲೆಯ ಸಿಂಗಾಪುರ್ ಟೌನ್ ಶಿಪ್ ನಲ್ಲಿ ಶನಿವಾರ ಕೆಲವೇ ಗಂಟೆಗಳಲ್ಲಿ 157.3 ಎಂಎಂ ಮಳೆ ಆಗಿರುವ ಬಗ್ಗೆ ಪಿಟಿಐ ವರದಿ ಮಾಡಿದೆ. ಹೈದ್ರಾಬಾದ್ ನಗರದ ಬಂದ್ಲಾಗುಡ ಹತ್ತಿರದ ಉಪ್ಪಾಳ್ ಪ್ರದೇಶದಲ್ಲಿ 153 ಎಂಎಂ ಮಳೆಯಾಗಿದೆ. ಹೈದರಾಬಾದ್ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಪಡೆಯು ನೀರು ನುಗ್ಗಿದ ಪ್ರದೇಶಗಳಲ್ಲಿನ ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಸುತ್ತಿದೆ. "ಡಿಆರ್ಎಫ್ ತಂಡಗಳು ನಿರಂತರವಾಗಿ ನೀರಿನ್ನು ತೆರವುಗೊಳಿಸುವ ಮತ್ತು ಪ್ರವಾಹ ಪರಿಸ್ಥಿತಿ ನಿಭಾಯಿಸುವ ಕೆಲಸ ಮಾಡುತ್ತಿವೆ. ನಿರಂತರ ಮಳೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ವಿಪತ್ತು ನಿರ್ವಹಣಾ ಪಡೆಯ ನಿರ್ದೇಶಕ ವಿಶ್ವಜಿತ್ ಕಂಪತಿ ಟ್ವೀಟ್ ಮಾಡಿದ್ದಾರೆ.
|
ಪ್ರವಾಹದಲ್ಲಿ ಕೊಚ್ಚಿ ಹೋದ ಆಟೋ, ಕಾರು
ಶನಿವಾರ ಸುರಿದ ಮಳೆಯಿಂದ ಬಾಲಾಪುರ್ ಕೆರೆಯ ಕಟ್ಟೆ ಒಡೆದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಲೋನಿಯಲ್ಲಿ ನೀರು ನುಗ್ಗುತ್ತಿದ್ದಂತೆ ರಸ್ತೆಗಳಲ್ಲೇ ನಿಲ್ಲಿಸಿದ್ದ ಆಟೋ ಮತ್ತು ಕಾರುಗಳು ಮಳೆ ನೀರಿನಲ್ಲಿ ತೇಲಿ ಹೋಗುತ್ತಿದ್ದವು. ಅಬ್ದುಲ್ಲಾಪೇಟ್ ಪ್ರದೇಶದಲ್ಲಿ ಸ್ಥಳೀಯರು ವಾಹನಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ತಡೆ ಹಿಡಿದಿದ್ದಾರೆ.
|
5 ಸಾವಿರ ಕೋಟಿ ರೂಪಾಯಿ ಆಸ್ತಿ-ಪಾಸ್ತಿ ನಷ್ಟದ ಅಂದಾಜು
ತೆಲಂಗಾಣದಲ್ಲಿ ಸುರಿದ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರಿ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಮಳೆಯಿಂದ ಹಾನಿಯಾದ ಸರ್ಕಾರಿ ಮತ್ತು ಖಾಸಗಿ ಆಸ್ತಿ-ಪಾಸ್ತಿಯ ಮೌಲ್ಯವನ್ನು ಸರ್ಕಾರವು ಲೆಕ್ಕ ಹಾಕುತ್ತಿದ್ದು, ಒಟ್ಟು 50000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ.