ಬಿಜೆಪಿಯನ್ನು ತಡೆಯುವುದು ಹೇಗೆಂದು ಇಡೀ ದೇಶಕ್ಕೆ ತೋರಿಸಿ ಕೊಟ್ಟಿದ್ದೇವೆ: ಟಿಆರ್ಎಸ್
ಹೈದರಾಬಾದ್, ಡಿಸೆಂಬರ್ 5: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೆಲಂಗಾಣದ ಆಡಳಿತಾರೂಢ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಬಿಜೆಪಿ ನೀಡಿದ ಅನಿರೀಕ್ಷಿತ ಪೈಪೋಟಿಯಿಂದ ಅದು ಬಹುಮತ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಪಾಲಿಕೆಯಲ್ಲಿ ಮೇಯರ್ ಹುದ್ದೆಯನ್ನು ಪಡೆದುಕೊಳ್ಳಲು ಟಿಆರ್ಎಸ್ಗೆ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಬೆಂಬಲ ಅಗತ್ಯವಾಗಿದೆ.
ಆದರೆ ಮೇಯರ್ ಹುದ್ದೆಯ ಆಯ್ಕೆಯಲ್ಲಿ ಎಐಎಂಐಎಂ ಬೆಂಬಲ ಕೋರುವ ವಿಚಾರವಾಗಿ ಇನ್ನೂ ಸಾಕಷ್ಟು ಸಮಯವಿದೆ. ನಾವು ಚರ್ಚಿಸಿ ಅದರ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಟಿಆರ್ಎಸ್ ನಾಯಕಿ ಮತ್ತು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಮಗಳು ಕೆ. ಕವಿತಾ ಹೇಳಿದ್ದಾರೆ.
ಗ್ರೇಟರ್ ಹೈದರಾಬಾದ್ ಚುನಾವಣೆ: ವಿರೋಧಿಗಳಿಗೆ ಬಿಜೆಪಿ ಕಳುಹಿಸಿದ ಬಲವಾದ ಸಂದೇಶ ಒಂದಾ ಎರಡಾ..
ಜಿಎಚ್ಎಂಸಿ ಚುನಾಣೆಯ ಫಲಿತಾಂಶವು ಟಿಆರ್ಎಸ್ನ ನಿರೀಕ್ಷೆಗಿಂತಲೂ ಕಡಿಮೆಯಾಗಿದ್ದು, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸುಮಾರು 12 ಕ್ಷೇತ್ರಗಳಲ್ಲಿ ಅತಿ ಕಡಿಮೆ ಅಂತರದಿಂದ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ.
ಬಿಜೆಪಿ ತಂತ್ರ ಅರ್ಥವಾಗಿದೆ
'ಬಿಜೆಪಿ ತನ್ನ ನಾಯಕರ ಪೆರೇಡ್ ನಡೆಸುವ ಮೂಲಕ ಮತದಾರರಲ್ಲಿ ಗೊಂದಲಮೂಡಿಸಿದೆ. ಎಲ್ಲ ಕಡೆಯೂ ಆಕ್ರಮಣಕಾರಿಯಾಗಿರುವುದು ಬಿಜೆಪಿಯ ತಂತ್ರಗಾರಿಕೆ. ನಮಗೆ ಈಗ ಬಿಜೆಪಿ ತಂತ್ರ ಅರ್ಥವಾಗಿದೆ. ಹೀಗಾಗಿ 2023ರ ಚುನಾವಣೆಯಲ್ಲಿ ನಾವು ಒಂದು ಹೆಜ್ಜೆ ಮುಂದಿರುವಂತೆ ನೋಡಿಕೊಳ್ಳುತ್ತೇವೆ' ಎಂದಿದ್ದಾರೆ.
ನಮ್ಮದು ದುರ್ಬಲ ಪಕ್ಷವಲ್ಲ
'ನಮ್ಮದು ದುರ್ಬಲ ಪಕ್ಷವಲ್ಲ. ನಾವು 60 ಲಕ್ಷ ಸದಸ್ಯರನ್ನು ಒಳಗೊಂಡ ಬಹಳ ಸಂಘಟಿತ ಪಕ್ಷ. 2023ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟು ಪ್ರತಿ ಹೋರಾಟ ನಡೆಸುತ್ತೇವೆ' ಎಂದು ಕವಿತಾ ಹೇಳಿದ್ದಾರೆ.
ಹೈದರಾಬಾದ್ ಚುನಾವಣೆ: ಅತಿ ಹೆಚ್ಚು ಸ್ಥಾನ ಗಳಿಸಿದ ಟಿಆರ್ಎಸ್
ದೇಶಕ್ಕೆ ಹೇಳಿಕೊಟ್ಟಿದ್ದೇವೆ
'ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದನ್ನು ತಡೆಯುವಲ್ಲಿ ನಾವು ಸಫಲರಾಗಿದ್ದೇವೆ. ದೇಶದ ಇತರೆ ಭಾಗದವರು ಟಿಆರ್ಎಸ್ ನೋಡಿ ಕಲಿಯಬಹುದು. ಬಿಜೆಪಿಯನ್ನು ಹೇಗೆ ತಡೆಯಬಹುದು ಎಂಬುದನ್ನು ಹೈದರಾಬಾದ್ ತೋರಿಸಿದೆ' ಎಂದು ಹೇಳಿದ್ದಾರೆ.
ಸೀಟುಗಳನ್ನು ಕಳೆದುಕೊಂಡ ಟಿಆರ್ಎಸ್
ಜಿಎಚ್ಎಂಸಿ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ಎಸ್ 150 ವಾರ್ಡ್ಗಳ ಪೈಕಿ 55 ವಾರ್ಡ್ಗಳಲ್ಲಿ ಗೆಲುವು ಕಂಡಿದೆ. ಬಿಜೆಪಿ 48 ಮತ್ತು ಎಐಎಂಐಎಂ 44 ಕ್ಷೇತ್ರಗಳಲ್ಲಿ ಜಯಗಳಿಸಿವೆ. 2016ರಲ್ಲಿನಡೆದ ಚುನಾವಣೆಯಲ್ಲಿ ಟಿಆರ್ಎಸ್ 99 ಸೀಟುಗಳಲ್ಲಿ ಗೆದ್ದು ಭರ್ಜರಿ ಬಹುಮತ ಪಡೆದುಕೊಂಡಿತ್ತು. ಆಗ ಬಿಜೆಪಿ ಕೇವಲ ನಾಲ್ಕು ಕಡೆ ಗೆಲುವು ಕಂಡಿತ್ತು. ಈ ಬಾರಿ ಟಿಆರ್ಎಸ್ ಶೇ 40ರಷ್ಟು ಸೀಟುಗಳನ್ನು ಕಳೆದುಕೊಂಡಿದೆ.