ಹಳೆ ನೋಟುಗಳಿಂದ ದಂಡ ಕಟ್ಬಹುದಾ ಅಂತಾನೆ ಯಾಸಿನ್!
ಹೈದರಾಬಾದ್, ಡಿಸೆಂಬರ್ 20 : "ನಾವು ದಂಡವನ್ನು ಹಳೆಯ ನೋಟುಗಳಲ್ಲಿ ನೀಡಬಹುದೆ?" ಇದು ದಿಲ್ ಸುಖ್ ನಗರದಲ್ಲಿ 2013ರಲ್ಲಿ ನಡೆಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಗ್ರ ಯಾಸಿನ್ ಭಟ್ಕಳ್ ಮತ್ತಿತರರು ನ್ಯಾಯಮೂರ್ತಿಗೆ ಕೇಳಿದ ಪ್ರಶ್ನೆ!
18 ಜನರನ್ನು ಬಲಿತೆಗೆದು, 119 ಜನರನ್ನು ಗಾಯಗೊಳಿಸಿ ರಕ್ತದೋಕುಳಿ ಹರಿಸಿದ್ದ ಯಾಸಿನ್ ಭಟ್ಕಳ್, ಜಿಯಾ-ಉರ್-ರೆಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖ್ತರ್, ಎಜಾಜ್ ಶೇಖ್ ಮತ್ತು ತಹಸೀನ್ ಅಖ್ತರ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದಲ್ಲದೆ, ಹಲವಾರು ನಿಯಮಗಳ ಪ್ರಕಾರ ದಂಡವನ್ನೂ ಎನ್ಐಎ ವಿಶೇಷ ನ್ಯಾಯಾಲಯ ವಿಧಿಸಿದೆ.
ನಮಗೆ 'ಗಲ್ಲು ಶಿಕ್ಷೆ ವಿಧಿಸಿ' ಎಂದು ನ್ಯಾಯಾಲಯವನ್ನು ಕೋರಿದ್ದ ಉಗ್ರರು ದಂಡ ತೆರುವ ಸಂಗತಿಯನ್ನು ಅಮಾಯಕವಾಗಿ ಕೇಳಿದರೋ, ಅಪನಗದೀಕರಣದ ಅಪಹಾಸ್ಯ ಮಾಡಿದರೋ ಗೊತ್ತಿಲ್ಲ. ಆದರೆ, ನ್ಯಾಯಮೂರ್ತಿ ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. [ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಯಾರು?]
2013ರ ಫೆಬ್ರವರಿ 21ರಂದು ದಿಲ್ ಸುಖ್ ನಗರದ ಕೋನಾರ್ಕ್ ಮತ್ತು ವೆಂಕಟಾದ್ರಿ ಚಿತ್ರಮಂದಿರದ ಬಳಿ ನಡೆದ ಅವಳಿ ಸ್ಫೋಟಗಳಲ್ಲಿ ಹದಿನೆಂಟು ಜನರು ಅಸುನೀಗಿದ್ದರು. ಇದರ ಹಿಂದೆ ಇಂಡಿಯನ್ ಮುಜಾಹಿದ್ದಿನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಮತ್ತಿತರರ ಕೈವಾಡವಿತ್ತು. [ಯಾಸಿನ್ ಭಟ್ಕಳ ಹಾಗೂ ನಾಲ್ವರು ಉಗ್ರರಿಗೆ ಗಲ್ಲು ಶಿಕ್ಷೆ]