ಎನ್ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ್ ವರ್ಗಾವಣೆ
ಹೈದರಾಬಾದ್, ಆಗಸ್ಟ್ 26; ಕನ್ನಡಿಗ ಮತ್ತು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ವರ್ಗಾಗಣೆಗೊಂಡಿದ್ದಾರೆ. ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿಗಳ ಎನ್ಕೌಂಟರ್ ವಿಚಾರದಲ್ಲಿ ವಿಶ್ವನಾಥ್ ದೇಶಾದ್ಯಂತ ಸುದ್ದಿಯಾಗಿದ್ದರು.
ತೆಲಂಗಾಣ ಸರ್ಕಾರ ವಿಶ್ವನಾಥ್ ಸಜ್ಜನರ್ ವರ್ಗಾವಣೆ ಮಾಡಿದೆ. ಎಂ. ಸ್ಟಿಫನ್ ರವೀಂದ್ರ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ವಿಶ್ವನಾಥ್ ಸಜ್ಜನರ್ ಟಿಎಸ್ಆರ್ಟಿಸಿ ಎಂಡಿಯಾಗಿ ನೇಮಕವಾಗಿದ್ದಾರೆ.
ಕರ್ನಾಟಕದ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ 1996ನೇ ಬ್ಯಾಚ್ ಐಪಿಎಸ್ ಅಧಿಕಾರಿ. 2018ರಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದರು. 2019ರ ನವೆಂಬರ್ 28ರಂದು ಹೈದರಾಬಾದ್ ಹೊರವಲಯದಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು, ಬಳಿಕ ಆಕೆಯನ್ನು ಹತ್ಯೆ ಮಾಡಲಾಗಿತ್ತು.

ಪೊಲೀಸರು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ ಎನ್ಕೌಂಟರ್ ಮಾಡಲಾಗಿತ್ತು. ನಾಲ್ವರು ಆರೋಪಿಗಳು ಸಹ ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
ಈ ಘಟನೆ ನಡೆದಾಗ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿದ್ದವರು ವಿಶ್ವನಾಥ್ ಸಜ್ಜನರ್. ಈ ಎನ್ಕೌಂಟರ್ ನಕಲಿ ಎಂಬ ಆರೋಪ ಕೇಳಿ ಬಂದಿತ್ತು. ವಿಶ್ವನಾಥ್ ಸಜ್ಜನರ್ ಇಡೀ ದೇಶಕ್ಕೆ ಪರಿಚಯವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಶ್ವನಾಥ್ ಸಜ್ಜನರ್ ಕಾರ್ಯಕ್ಕೆ ಹಲವರು ಬೆಂಬಲ ಸಹ ನೀಡಿದ್ದರು.
ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ವಿಶ್ವನಾಥ್ ಸಜ್ಜನರ್ ಖ್ಯಾತಿಗಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲ ಹಲವಾರು ಸೇವಾ ಕಾರ್ಯಗಳನ್ನು ಕೈಗೊಂಡು ಕಮೀಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಸುಧಾರಣೆಗಳನ್ನು ವಿಶ್ವನಾಥ್ ತಂದಿದ್ದಾರೆ.
ನಕ್ಸಲ್ ನಾಯಕನ ಎನ್ಕೌಂಟರ್, ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳ ಎನ್ಕೌಂಟರ್ ಸೇರಿ ಮೂರು ಎನ್ಕೌಂಟರ್ಗಳನ್ನು ವಿಶ್ವನಾಥ್ ಸಜ್ಜನರ್ ಮಾಡಿದ್ದಾರೆ. ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಎನ್ಕೌಂಟರ್ ಭಾರೀ ಸದ್ದು ಮಾಡಿತ್ತು. ಈ ಎನ್ಕೌಂಟರ್ ನಕಲಿ ಎಂದು ಸುಪ್ರೀಂಕೋರ್ಟ್ಗೆ ಸಹ ಅರ್ಜಿ ಸಲ್ಲಿಕೆಯಾಗಿದೆ. ಈ ಎನ್ಕೌಂಟರ್ ಬಗ್ಗೆ ನ್ಯಾಯಮೂರ್ತಿಗಳ ಸಮಿತಿ ತನಿಖೆ ಸಹ ನಡೆಸುತ್ತಿದೆ.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ತೆರಳಲು ವಿಶ್ವನಾಥ್ ಸಜ್ಜನರ್ ಸಹಾಯ ಮಾಡಿದ್ದರು. ಸರ್ಕಾರ ಈಗ ಅವರನ್ನು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಿದೆ.
ಹುಬ್ಬಳ್ಳಿ ಮೂಲದವರು; ವಿಶ್ವನಾಥ್ ಸಜ್ಜನರ್ ಹುಬ್ಬಳ್ಳಿ ಮೂಲದವರು. ಹುಬ್ಬಳ್ಳಿಯ ಪಗಣಿ ಓಣಿಯವರು. ತಂದೆ ಚನ್ನಬಸಪ್ಪ ಬಿ. ಸಜ್ಜನ್. ಮೂವರು ಮಕ್ಕಳ ಪೈಕಿ ವಿಶ್ವನಾಥ್ ಸಜ್ಜನರ್ ಕಿರಿಯರು. ವಿಶ್ವನಾಥ್ ಸಜ್ಜನರ್ ಸಹೋದರ ಮಲ್ಲಿಕಾರ್ಜುನ ಸಜ್ಜನರ್ ವೈದ್ಯರು.
ವಿಶ್ವನಾಥ್ ಸಜ್ಜನರ್ ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದಾರೆ. ಜೆಜಿ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದಾರೆ.
1996ರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅವರು ಆಂಧ್ರ ಪ್ರದೇಶ ಕೆಡರ್ನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿರುವ ಎಂ. ಸ್ಟಿಫನ್ ರವೀಂದ್ರ 1999ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಸೈಬರಾಬಾದ್ ಹೆಚ್ಚುವರಿ ಪೊಲೀಸ್ ಆಯುಕ್ತಾಗಿ ಸಹ ಹಿಂದೆ ಕೆಲಸ ಮಾಡಿದ್ದರು. ಹೈದರಾಬಾದ್ ಡಿಸಿಪಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಎಂ. ಸ್ಟಿಫನ್ ರವೀಂದ್ರರನ್ನು ರಾಜ್ಯದ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ನೇಮಕ ಮಾಡಿದ್ದರು. ಆದರೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗದ ಕಾರಣ ನೇಮಕಾತಿ ರದ್ದಾಗಿತ್ತು.












Click it and Unblock the Notifications