2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ: ಚಂದ್ರಬಾಬು ನಾಯ್ಡು
ಹೈದರಾಬಾದ್, ಮೇ, 28: 2019ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶ, ತೆಲಂಗಾಣ ಮತ್ತು ಇತರೆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ, ಅವರು ಕರ್ನಾಟಕದಲ್ಲಿ ಅಧಿಕಾರ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಬಿಜೆಪಿ 2019ರಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ವಿಫಲವಾದ ಬಿಜೆಪಿ ಇಲ್ಲಿನ ಜನರನ್ನು ನಿರಾಸೆಗೊಳಿಸಿದೆ ಎಂದು ಆರೋಪಿಸಿದರು.

ಹೊಸ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಮತ್ತು ಪೋಲಾವರಂ ರಾಷ್ಟ್ರೀಯ ನೀರಾವರಿ ಯೋಜನೆಯಂತಹ ಕಾರ್ಯಕ್ರಮಗಳಿಗೆ ಅಗತ್ಯ ಹಣಕಾಸಿನ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸಿಲ್ಲ ಎಂದು ನಾಯ್ಡು ದೂರಿದರು.
ಕಪ್ಪು ಹಣ ತರುವ ಕುರಿತು ಅವರು ಮಾತನಾಡುತ್ತಾರೆ. ಆದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಹಣ ಪಡೆದು ವಂಚಿಸಿದ ವ್ಯಕ್ತಿ ದೇಶವನ್ನೇ ಬಿಟ್ಟು ಹೋಗಿದ್ದಾನೆ. ಜಿಎಸ್ಟಿ ಕೂಡ ಸಾಮಾನ್ಯರ ಜನರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

ನಾಯ್ಡು ಏಕೆ ದೂರವಾದರೋ? ಆಶ್ಚರ್ಯವಾಗುತ್ತಿದೆ
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಟಿಡಿಪಿ ಪಕ್ಷವು ಈಗ ಏಕೆ ದೂರವಾಗಿದೆ ಎಂಬುದು ಆಶ್ಚರ್ಯ ಮೂಡಿಸುತ್ತಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಅವರು, ಇದು ಒಳ್ಳೆಯ ಸಂಗತಿಯಲ್ಲ. ಅವರು ಮೈತ್ರಿಕೂಟವನ್ನು ತೊರೆದುಹೋಗಬಾರದಿತ್ತು ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ವಿರೋಧ ಪಕ್ಷಗಳೆಲ್ಲವೂ ಕೈಜೋಡಿಸಲು ಮುಂದಾಗಿವೆಯಲ್ಲ ಎಂಬ ಪ್ರಶ್ನೆಗೆ ಅವರು, ಅವರು ಹೋರಾಟ ನಡೆಸಲಿ. ನಾವು ಆಕ್ಷೇಪ ಹೊಂದಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಪ್ರಬಲವಾದ ವಿರೋಧಪಕ್ಷವಿರಬೇಕು.
ಬಹುಶಃ ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಹೀನಾಯ ಸ್ಥಿತಿಗೆ ತಲುಪಿರುವುದು ಅವರೆಲ್ಲರೂ ಒಂದುಗೂಡುವ ಅನಿವಾರ್ಯತೆ ತಂದಿದೆ. ಅದರ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ. ಅವರ ಮೈತ್ರಿಕೂಟ ಪ್ರಭಾವ ಉಂಟುಮಾಡುವುದಿಲ್ಲ ಎಂಬುದನ್ನು ಇತಿಹಾಸ ತೋರಿಸಿದೆ. ಭವಿಷ್ಯದಲ್ಲಿ ಅವರ ಮೈತ್ರಿ ಉಳಿಯುವುದೂ ಸಹ ಖಚಿತವಿಲ್ಲ ಎಂದರು.












Click it and Unblock the Notifications