ಬಿಜೆಪಿ ಜತೆ ಮುನಿಸು, ಉದ್ಧವ್ ಠಾಕ್ರೆ ಜತೆ ನಾಯ್ಡು ಸಮಾಲೋಚನೆ
ಅಮರಾವತಿ, ಫೆಬ್ರವರಿ 5: ಕೇಂದ್ರ ಬಜೆಟ್ ನಿಂದ ಆಕ್ರೋಶಗೊಂಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜತೆ ಮಾತುಕತೆ ನಡೆಸಿದ್ದಾರೆ.
ಮಾತುಕತೆ ವೇಳೆ ಮಿತ್ರ ಪಕ್ಷಗಳ ಬಗ್ಗೆ ಬಿಜೆಪಿ ತಳೆಯುತ್ತಿರುವ ನಿಲುವಿನ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಧವ್ ಜತೆ ನಿರಂತರ ಸಂಪರ್ಕದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮಾತುಕತೆ ವೇಳೆ ಬಿಜೆಪಿಯ ಮಲತಾಯ ಧೋರಣೆ ಬಗ್ಗೆ ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೆ 2019ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂಬ ಅಭಿಪ್ರಾಯ ಟಿಡಿಪಿಯಲ್ಲಿದೆ ಎಂಬುದನ್ನು ನಾಯ್ಡು ಠಾಕ್ರೆ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಬಹಿರಂಗವಾಗಿಲ್ಲ ನಾಯ್ಡು ನಿರ್ಧಾರ
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಟಿಡಿಪಿ ಸಂಸದೀಯ ಪಕ್ಷದ ಸಭೆ ಇಂದು ನಡೆದಿದ್ದು ಪ್ರಮುಖವಾಗಿ ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ತನ್ನ ತೀರ್ಮಾನವನ್ನು ನಾಯ್ಡು ಇನ್ನೂ ಬಹಿರಂಗಪಡಿಸಿಲ್ಲ. ಟಿಡಿಪಿಯ ತೀರ್ಮಾನ ಇನ್ನೂ ಗುಪ್ತವಾಗಿದೆ.

ಶಿವಸೇನೆ ಸ್ಪಷ್ಟ ನಿರ್ಧಾರ
ಇತ್ತೀಚೆಗೆ ಶಿವಸೇನೆ ಬಿಜೆಪಿಯಿಂದ ಹೊರಬರುವ ತೀರ್ಮಾನವನ್ನು ಪ್ರಕಟಿಸಿತ್ತು. 2019ರ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿತ್ತು. ಇದೀಗ ಟಿಡಿಪಿ ಕೂಡ ಇದೇ ನಿರ್ಧಾರ ಹೊರ ಹಾಕುವ ಸಾಧ್ಯತೆ ಇದೆ.












Click it and Unblock the Notifications