'ಹೈದರಾಬಾದ್ ಮೀನು' ಮೋದಿ ಗಾಳಕ್ಕೆ ಬೀಳುವುದೇ?
ಹೈದರಾಬಾದ್, ಸೆಪ್ಟೆಂಬರ್ 17: ಅತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರೇನೂ ನರೇಂದ್ರ ಮೋದಿಯನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಯಾಗಿದೆ. ಆದರೆ ಇತ್ತ NDA ಮಿತ್ರ ಪಕ್ಷಗಳ ಚಿತ್ತ ಎತ್ತ ಎಂಬುದು ಇಂಟರೆಸ್ಟಿಂಗ್ ಆಗಿದೆ.
ಆಂಧ್ರದತ್ತ ಕಣ್ಣುಹಾಯಿಸಿದಾಗ ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಮತ್ತೆ ಎನ್ಡಿಎ ಮೈತ್ರಿಕೂಟ ಸೇರುವ ಸುಳಿವು ನೀಡಿರುವುದು ಗಮಾರ್ಹವಾಗಿದೆ. ಇದರಿಂದ ಹೈದರಾಬಾದ್ ಟು ಅಹಮದಾಬಾದ್ ಹಾಟ್ ಲೈನ್ ಸಂಪರ್ಕವೇರ್ಪಡುವ ಸಾಧ್ಯತೆಗಳಿವೆ. (ಅಂದಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ನಾರವಾರಿ ಪಲ್ಲಿಯಲ್ಲಿ ಏಪ್ರಿಲ್ 20, 1950ರಲ್ಲಿ ನಾಯ್ಡು ಜನನ)
ಕಾಂಗ್ರೆಸ್ ಮತ್ತು ಯುಪಿಎಯನ್ನು ತೆಗಳಿರುವ ನಾಯ್ಡು, ಹಿಂದಿನ ಎನ್ ಡಿಎ ಸರಕಾರದ ಆಳ್ವಿಕೆಯನ್ನು ಹೊಗಳುವ ಮೂಲಕ ಎನ್ಡಿಎಗೆ ಮರಳುವ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆಂಧ್ರದಲ್ಲಿ 42 ಲೋಕಸಭಾ ಸ್ಥಾನಗಳಿವೆ.

ಕಾರಣಗಳೇನು?
ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಈ ನಡೆಗೆ ಕಾರಣವಾಗಿರುವ ವಿದ್ಯಮಾನಗಳಾದರೂ ಏನು? ಎಂದು ಆಲೋಚಿಸಿದಾಗ ತಮ್ಮ ಸ್ವಂತ ನೆಲದಲ್ಲಿ ಕಾಂಗ್ರೆಸ್ ಈ ಬಾರಿ ಧೂಳಿಪಟವಾಗುವ ಸಾಧ್ಯತೆಗಳು ಚಂದ್ರಬಾಬುಗೆ ನಿಚ್ಚಳವಾಗಿ ಗೋಚರಿಸಿವೆ. ಇದರರ್ಥ ಕಾಂಗ್ರೆಸ್, ಚಿರಂಜೀವಿ ಫ್ಯಾಕ್ಟರ್ ಎಲ್ಲಾ ಮೂಲೆಗುಂಪಾಗಲಿದ್ದು, ಮತ್ತೆ ತಮಗೆ ಅಧಿಕಾರ ಪ್ರಾಪ್ತಿಯಾಗಬಹುದು ಎಂಬ ಭರವಸೆಯಲ್ಲಿದ್ದಾರೆ ಚಂದ್ರಬಾಬು.

ತೃತೀಯ ರಂಗ ರಚನೆ ಸಾಧ್ಯತೆ ಕ್ಷೀಣ
ಇದೇ ವೇಳೆ, ತೃತೀಯ ರಂಗ ರಚನೆ ಸಾಧ್ಯತೆ ಕ್ಷೀಣವಾಗುತ್ತಿರುವ ಹಿನ್ನೆಲೆಯಲ್ಲಿ ಮರಳಿ ಎನ್ ಡಿಎ ವೇದಿಕೆಯೇರಲು ಚಂದ್ರಬಾಬು ಅಣಿಯಾಗುತ್ತಿದ್ದಾರೆ ಎನ್ನಲಾಗಿದೆ.

ಎನ್ಡಿಎ ಸರಕಾರದ ಸಾಧನೆಯ ಫಲವುಂಡ ಯುಪಿಎ
ಎನ್ಡಿಎ ಸರಕಾರ 1999ರಿಂದ 2004 ರ ತನಕ ಮಾಡಿದ ಎಲ್ಲ ಒಳ್ಳೆಯ ಕೆಲಸಗಳ ಫಲಗಳನ್ನು ಯುಪಿಎ ಸರಕಾರ ಕಳೆದೆರಡು ಅವಧಿಯಲ್ಲಿ ಉಂಡಿದೆ ಎಂದು ಟೀಕಿಸಿರುವ ಚಂದ್ರಬಾಬು, ಯುಪಿಎ-2 ಭ್ರಷ್ಟಾಚಾರ ಮತ್ತು ಹಗರಣಗಳಿಂದಾಗಿ ದೇಶ ಬಿಕ್ಕಟ್ಟಿನಲ್ಲಿದ್ದು, ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಯುಪಿಎ-2 ದೇಶಕ್ಕೆ ಶಾಪವಾಗಿ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಹೈದರಾಬಾದಿನಲ್ಲಿ ಮೋದಿಯಿಂದ NTR ಗುಣಗಾನ
ಕಳೆದ ತಿಂಗಳು ಹೈದರಾಬಾದಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮೋದಿ ಅವರು ಮಾಜಿ ಮುಖ್ಯಮಂತ್ರಿ ದಿ. ಎನ್ ಟಿಆರ್ ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ತೊಲಗಿಸಿದರು. ಅವರ ಪರಂಪರೆಯನ್ನು ಟಿಡಿಪಿ ಮೈಗೂಡಿಸಿಕೊಂಡಿದೆ ಎಂದು ಹೊಗಳಿದ್ದರು. ಹಾಗಾಗಿ ಬಿಜೆಪಿ ಮತ್ತು ಟಿಡಿಪಿ ಸಮಾನ ಮನಸ್ಕ ಪಕ್ಷಗಳಾಗಿವೆಯಾ? ಎರಡೂ ಪಕ್ಷಗಳ ಆಶಯ NDA ಕೂಟವನ್ನು ಮತ್ತೆ ಅಧಿಕಾರಕ್ಕೆ ತರುವುದೇ ಆಗಿದೆಯಾ? ಕಾಲವೇ ಇದಕ್ಕೆ ಉತ್ತರಿಸಬೇಕು.

ನಾಯ್ಡು 2,000 ಕೋಟಿ ರೂ ಆಸ್ತಿವಂತ?
ಈ ಮಧ್ಯೆ, ಪ್ರತಿಪಕ್ಷ ನಾಯಕ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು 2,000 ಕೋಟಿ ರೂ ಆಸ್ತಿವಂತರಾಗಿದ್ದಾರೆ ಎಂದು ವಿರೋಧಿಗಳು ಆರೋಪಿಸಿದ್ದರು. ಅದಕ್ಕೆ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ನಾಯ್ಡು ಪ್ರತಿವರ್ಷದಂತೆ ಈ ಬಾರಿಯೂ ತಮ್ಮ ಮತ್ತು ಕುಟುಂಬಸ್ಥರ ಆಸ್ತಿಪಾಸ್ತಿ ವಿವರವನ್ನು ಘೋಷಿಸಿದ್ದಾರೆ.
1994ರಿಂದ 2004ರವರೆಗೂ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು, ತಮ್ಮ ವಿರೋಧಿಗಳು ಹೇಳುವಂತೆ ತಮ್ಮ ಬಳಿ 2,000 ಕೋಟಿ ರೂ ಆಸ್ತಿಯಿರುವುದು ರುಜುವಾತುಪಡಿಸಿದರೆ ಅಷ್ಟೂ ಆಸ್ತಿಯನ್ನು ದಾನ ಮಾಡುವುದಾಗಿ ಹೇಳಿದ್ದಾರೆ.

ಸ್ವತಃ ನಾಯ್ಡು ಘೋಷಿಸಿರುವ ಆಸ್ತಿ 41.70 ಕೋ
ಸ್ವತಃ ಚಂದ್ರಬಾಬು ನಾಯ್ಡು ಅವರೇ ಘೋಷಿಸಿರುವಂತೆ ಅವರ ಮತ್ತು ಕುಟುಂಬದ ಒಟ್ಟು ಆಸ್ತಿ ಮೊತ್ತ 41.70 ಕೋಟಿ ರೂ. ಈ ಮೊತ್ತ 2011ರಲ್ಲಿ 40 ಕೋಟಿ ರೂ. ನಷ್ಟಿತ್ತು. ಅದೇ ಕಳೆದ ವರ್ಷ 35.59 ಕೋಟಿ ರೂ. ಗೆ ಕುಸಿದಿತ್ತು.
ಚಂದ್ರಬಾಬು ನಾಯ್ಡು ವ್ಯಕ್ತಿಗತ ಆಸ್ತಿ 42.06 ಲಕ್ಷ ರೂ. ಕಳೆದ ವರ್ಷ ಈ ಮೊತ್ತ 31.97 ಲಕ್ಷ ರೂ. ಇತ್ತು. ನಾಯ್ಡು ಪತ್ನಿ ಭುವನೇಶ್ವರಿ ಅವರು Heritage Foods ಕಂಪನಿಯ ಮಾಲೀಕರಾಗಿದ್ದು 33.05 ಕೋಟಿ ರೂ (ಹಿಂದಿನ ವರ್ಷ 24.57 ಕೋಟಿ ರೂ) ಆಸ್ತಿ ಹೊಂದಿದ್ದಾರೆ.

ನಾಯ್ಡು ಪುತ್ರ ಲೋಕೇಶ್ ಬಳಿ 4.92 ಕೋಟಿ ರೂ
ನಾಯ್ಡು ಪುತ್ರ ಲೋಕೇಶ್ ಬಳಿ 4.92 ಕೋಟಿ ರೂ (ಹಿಂದಿನ ವರ್ಷ 6.62 ಕೋಟಿ ರೂ) ಆಸ್ತಿಯಿದೆಯಂತೆ. ಲೋಕೇಶ್ ನಾಯ್ಡು ಪತ್ನಿ ಬ್ರಹ್ಮಣಿ (ಚಂದ್ರಬಾಬು ಭಾವಮೈದುನ ನಟ ನಂದಮೂರಿ ಬಾಲಕೃಷ್ಣ ಅವರ ಪುತ್ರಿ) ಬಳಿ 3.30 ಕೋಟಿ ರೂ ಇದೆಯಂತೆ.












Click it and Unblock the Notifications