ಬಾಬ್ರಿ ಕೇಸ್ ನಂಬಿಕೆ ಮೇಲೆ ನಿರ್ಧರಿಸಲಾಗದು : ಓವೈಸಿ
ಹೈದರಾಬಾದ್, ಡಿಸೆಂಬರ್ 05: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
ಕೇವಲ ನಂಬಿಕೆ ಆಧಾರದ ಮೇಲೆ ಈ ಪ್ರಕರಣ ಇತ್ಯರ್ಥ ಸಾಧ್ಯವಿಲ್ಲ. ಕೋರ್ಟಿನಲ್ಲಿ ಸಾಕ್ಷಿ ಆಧಾರಗಳೇ ಮುಖ್ಯ ಎಂದಿದ್ದಾರೆ. ಈ ಮೂಲಕ ಸಂಘ ಪರಿವಾರಗಳ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಅಕ್ಟೋಬರ್ 18, 2018ರಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ರಾಮಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ನೀಡಿರುವ ಹೇಳಿಕೆಯನ್ನು ಓವೈಸಿ ಖಂಡಿಸಿದರು.
ಸುಪ್ರೀಂಕೋರ್ಟಿನಲ್ಲಿ ವಿವಾದದ ವಿಚಾರಣೆ ಇನ್ನೂ ಜಾರಿಯಲ್ಲಿರುವಾಗ ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದು ಬುಧವಾರಕ್ಕೆ 25 ವರ್ಷವಾಗುತ್ತದೆ. ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರಿರುವ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 08, 2018ಕ್ಕೆ ಮುಂದೂಡಿದ್ದಾರೆ. 2010ರಲ್ಲಿ ವಿವಾದದ ಸಂಬಂಧ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 13 ಅರ್ಜಿಗಳ ವಿಚಾರಣೆ ನಡೆಯಬೇಕಿದೆ.
ಉತ್ತರಪ್ರದೇಶದ ಶಿಯಾ ಮುಸ್ಲಿಂ ಸಂಘಟನೆಯೊಂದು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ನಮ್ಮ ಅಭ್ಯಂತರವೇನು ಇಲ್ಲ ಎಂದು ಕೋರ್ಟಿಗೆ ತಿಳಿಸಿದೆ. ಮುಂದಿನ ವಿಚಾರಣೆಯನ್ನು ಲೋಕಸಭೆ ಚುನಾವಣೆ 2019ಗೂ ಮುನ್ನ ನಡೆಸಬೇಕು ಎಂದು ಸುನ್ನಿ ಮುಸ್ಲಿಮ್ ಪಂಗಡದ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದಾರೆ.












Click it and Unblock the Notifications