ಹೈದರಾಬಾದ್ : ಮೃತಳ ಕುಟುಂಬವನ್ನು ಸಂತೈಸೋಕೆ ಬಂದಿದ್ದ ಕೊಲೆಗಾರ!
ಹೈದರಾಬಾದ್, ಸೆಪ್ಟೆಂಬರ್ 13: ಯುವತಿಯೊಬ್ಬಳನ್ನು ಸಾಯಿಸಿ, ನಂತರ ಆಕೆಯ ಕುಟುಂಬಸ್ಥರನ್ನು ಸ್ವತಃ ಸಂತೈಸಲು ಬಂದಿದ್ದ ಕೊಲೆಗಾರನನ್ನು ಬಂಧಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್
ಹೈದರಾಬಾದಿನ ವ್ಯಾಪಾರಿಯೊಬ್ಬರ 17 ವರ್ಷದ ಮಗಳು ಸೆ. 9 ರಂದು ಶನಿವಾರದಿಂದ ನಾಪಯತ್ತೆಯಾಗಿದ್ದಳು. ಸ್ನೇಹಿತರನ್ನು ಭೇಟಿಯಾಗಲು ಹೋಗುತ್ತೆನೆಂದು ತೆರಳಿದವಳು ರಾತ್ರಿಯಾದರೂ ಬಾರದಿದ್ದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಹುಡುಗಿಯ ಪತ್ತೆಗೆ ಬಲೆ ಬೀಸಿದ್ದ ಪೊಲೀಸರಿಗೆ ಮಂಗಳವಾರದಂದು ಆಕೆಯ ಕೊಳೆತ ಶವ ಸಿಕ್ಕಿತ್ತು. ಯುವತಿಯ ಸಾವಿನ ನಂತರ ಆಕೆಯ ಪೋಷಕರನ್ನು ಸಂತೈಸಲು ಬಂದಿದ್ದ ಸಾಯಿ ಕಿರಣ್ ಎಂಬ ಯುವತಿಯ ಸ್ನೇಹಿತನೇ ಈ ಕೊಲೆ ಮಾಡಿರುವುದು ತನಿಖೆಯ ನಂತರ ಪೊಲೀಸರಿಗೆ ತಿಳಿದುಬಂದಿದೆ. ಯುವತಿ ಶನಿವಾರ ಸಾಯಿ ಕಿರಣ್ ಜೊತೆಯಲ್ಲೇ ಆಟೋ ಹತ್ತಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದ್ದವು.
ಸಾಯಿ ಕಿರಣ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಯುವತಿಯೊಂದಿಗೆ ತಾನು ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದೆ. ನಾನು ಆಕೆಯನ್ನೇ ಮದುವೆಯಾಗಬೇಕು ಎಂಬುದು ಯುವತಿಯ ಆಸೆಯಾಗಿತ್ತು. ಆದರೆ ನನಗೆ ಆಕೆಯನ್ನು ಮದುವೆಯಾಗುವುದಕ್ಕೆ ಇಷ್ಟವಿರಲಿಲ್ಲ. ಪದೇ ಪದೇ ಆಕೆ ಒತ್ತಡ ಹೇರುತ್ತಿದ್ದರಿಂದ ಕಿರಿಕಿರಿಯಾಗಿ ಆಕೆಯನ್ನು ಸಾಯಿಸಿದ್ದಅಗಿ ಒಪ್ಪಿಕೊಂಡಿದ್ದಾನೆ.