ಒಂದೇ ಕುಟುಂಬದ 19 ಮಂದಿಗೆ ಕೊರೊನಾ ವೈರಸ್ ಸೋಂಕು
ಹೈದರಾಬಾದ್, ಜೂನ್ 14 : ತೆಲಂಗಾಣದಲ್ಲಿ ಒಂದೇ ಕುಟುಂಬದ 19 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಎಲ್ಲರೂ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮೃತಪಟ್ಟ ಮಹಿಳೆಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು.
ಜೂನ್ 9ರಂದು 55 ವರ್ಷದ ಮಹಿಳೆಯೊಬ್ಬರು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕುಟುಂಬ ಸದಸ್ಯರು ಜಹೀರಾಬಾದ್ನ ಮನೆಗೆ ಶವವನ್ನು ತೆಗೆದುಕೊಂಡು ಹೋಗಿದ್ದರು. ಅಂದು ಸಂಜೆಯೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು.
ಮೃತಪಟ್ಟ ಮಹಿಳೆಗೆ ಕೊರೊನಾ ವೈರಸ್ ಸೋಂಕು ಇರುವುದು ಅಂತ್ಯ ಸಂಸ್ಕಾರದ ಮರುದಿನ ಖಚಿತವಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿದ್ದರು.

ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ 25 ಜನರಲ್ಲಿ 6 ಜನರಿಗೆ ಮಾತ್ರ ಕೊರೊವಾ ವೈರಸ್ ಸೋಂಕಿನ ವರದಿ ನೆಗೆಟಿವ್ ಬಂದಿದೆ. 19 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಜೊತೆ ಸಂಪರ್ಕದಲ್ಲಿದ್ದ ಸಂಬಂಧಿಕರಿಗಾಗಿ ಹುಡಕಾಟ ನಡೆಯುತ್ತಿದೆ.
ಜಹೀರಾಬಾದ್ ಪ್ರದೇಶವನ್ನು ಅಧಿಕಾರಿಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಎಲ್ಲಾ 19 ಜನರನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್ - 19 ವಿಭಾಗಕ್ಕೆ ದಾಖಲು ಮಾಡಲಾಗಿದೆ.
ಸಚಿವರು, ಮೇಯರ್ ಕ್ವಾರಂಟೈನ್ನಲ್ಲಿ : ತೆಲಂಗಾಣದ ಹಣಕಾಸು ಸಚಿವ ಟಿ. ಹರೀಶ್ ರಾವ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ತಮ್ಮ ಆಪ್ತ ಸಹಾಕಯಕನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾದ ಬಳಿಕ ಅವರು ಪರೀಕ್ಷೆ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ.
ಹೈದರಾಬಾದ್ ಮೇಯರ್ ಬಿ. ರಾಮಮೋಹನ್ ರಾವ್ ಸಹ ಕ್ವಾರಂಟೈನ್ನಲ್ಲಿದ್ದಾರೆ. ತಮ್ಮ ಕಾರಿನ ಚಾಲಕನಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಅವರು ಸಹ ಪರೀಕ್ಷೆಗೆ ಒಳಗಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೂ ಸಹ ಕ್ವಾರಂಟೈನ್ನಲ್ಲಿದ್ದಾರೆ.












Click it and Unblock the Notifications