ಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂ
ಹೈದರಾಬಾದ್, ಜೂನ್ 29 : ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ ಮತ್ತೊಮ್ಮೆ 15 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಯಾಗುವ ಸುಳಿವು ಸಿಕ್ಕಿದೆ. ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,811.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಈ ಕುರಿತು ಸುಳಿವು ನೀಡಿದ್ದಾರೆ. ಮೂರು ದಿನಗಳ ಕಾಲ ನಗರದ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಸಚಿವ ಸಂಪುಟ ಸಭೆ ಕರೆಯಲು ತೀರ್ಮಾನಿಸಲಾಗಿದೆ.
ಹೈದರಾಬಾದ್ ನಗರದ ಪರಿಸ್ಥಿತಿ ಬಗ್ಗೆ ಭಾನುವಾರ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಸಭೆ ನಡೆಸಿದರು. ಅನ್ ಲಾಕ್ ಜಾರಿಗೊಂಡ ಬಳಿಕ ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಮತ್ತೊಂದು ಲಾಕ್ ಡೌನ್ ಜಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎರಡು ಮೂರು ದಿನದ ಪರಿಸ್ಥಿತಿ ನೋಡಿಕೊಂಡು ಪುನಃ ಲಾಕ್ ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ಸಲಹೆ ಬಂದಿತು. ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳಿಗೆ ಸಿದ್ಧವಾಗಿರುವಂತೆ ಸಿಎಂ ಸೂಚನೆ ನೀಡಿದರು.

ಚೆನ್ನೈ ಮಾದರಿಯಲ್ಲಿ ಕ್ರಮ
ತಮಿಳುನಾಡು ಸರ್ಕಾರ ಕೊರೊನಾ ವೈರಸ್ ಸೋಂಕು ಹೆಚ್ಚಿರುವ ಚೆನ್ನೈ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ 12 ದಿನದ ಲಾಕ್ ಡೌನ್ ಜಾರಿಗೊಳಿಸಿದೆ. ಇದೇ ಮಾದರಿಯಲ್ಲಿ ಹೈದರಾಬಾದ್ನಲ್ಲಿ ಪುನಃ ಲಾಕ್ ಡೌನ್ ಜಾರಿಗೊಳಿಸಬಹುದು, ಬೇರೆ ಸಾಧ್ಯತೆಗಳ ಬಗ್ಗೆಯೂ ಚಿಂತಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಹೈದರಾಬಾದ್ ನಗರ
ತೆಲಂಗಾಣ ರಾಜ್ಯದ ಕೊರೊನಾ ವೈರಸ್ ಸೋಂಕಿತರ ಪೈಕಿ ಶೇ 60ರಷ್ಟು ಪ್ರಕರಣ ಹೈದರಾಬಾದ್ ನಗರದಲ್ಲಿದೆ. ಗ್ರೇಟರ್ ಹೈದರಾಬಾದ್ ನಗರಾಡಳಿತ (ಜಿಎಚ್ಎಂಸಿ) ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ಜನಸಂಖ್ಯೆ ಇದೆ. ನಗರದಲ್ಲಿ 500ಕ್ಕೂ ಅಧಿಕ ಪ್ರಕರಣ ಕಳೆದ 10 ದಿನಗಳಿಂದ ದಾಖಲಾಗುತ್ತಿದೆ. ಇದರಿಂದಾಗಿ ಲಾಕ್ ಡೌನ್ ಜಾರಿ ಬಗ್ಗೆ ಚಿಂತನೆ ನಡೆದಿದೆ.

ಕಠಿಣವಾಗಿ ಜಾರಿಗೊಳಿಸಬೇಕು
"ಒಂದು ವೇಳೆ ಲಾಕ್ ಡೌನ್ ಜಾರಿಯಾದರೆ ಕಠಿಣವಾಗಿ ಅದನ್ನು ಅನುಷ್ಠಾನಕ್ಕೆ ತರಬೇಕು. ಅಗತ್ಯ ವಸ್ತುಗಳ ಖರೀದಿಗಾಗಿ 2 ರಿಂದ 3 ಗಂಟೆ ಮಾತ್ರ ಸಮಯ ನೀಡಬೇಕು. ವಿಮಾನ ಮತ್ತು ರೈಲು ಸೇವೆಯನ್ನು ನಿಲ್ಲಿಸಬೇಕು" ಎಂದು ಕೆ. ಚಂದ್ರಶೇಖರರಾವ್ ಸೂಚನೆ ನೀಡಿದರು.

ಜನರಿಗೆ ಆತಂಕ ಬೇಡ
ರಾಜ್ಯದ ಆರೋಗ್ಯ ಸಚಿವ ಎಟೆಲಾ ರಾಜೇಂದ್ರ, "ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications