ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಗಳಿಗೆ ಶರತ್ತು ಬದ್ಧ ಜಾಮೀನು
ಹುಬ್ಬಳ್ಳಿ, ಏಪ್ರಿಲ್ 22 : ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಶರತ್ತು ಬದ್ದ ಜಾಮೀನು ಸಿಕ್ಕಿದೆ. ಕೊಲೆ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಧಾರವಾಡ ಜಿಲ್ಲಾ ನಾಲ್ಕನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಹೊಸಮನಿ ಸಿದ್ಧಪ್ಪ ಅವರು, ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ, ಆದೇಶ ಹೊರಡಿಸಿದರು. ಆರೋಪಿಗಳಾದ ಮಹಾಬಲೇಶ್ವರ ಅಲಿಯಾಸ್ ಮುದುಕಪ್ಪ ಹೊಂಗಲ್, ವಿಕ್ರಂ ಬಳ್ಳಾರಿ, ವಿನಾಯಕ ಕಟಗಿ, ಸಂದೀಪ್ ಅಲಿಯಾಸ್ ಸ್ಯಾಂಡಿ, ಕೀರ್ತಿಕುಮಾರ ಅವರಿಗೆ ಜಾಮೀನು ನೀಡಲಾಗಿದೆ.
ಈ ಹಿಂದೆಯೇ ಕೊಲೆ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ಮೇಲೆ ಹೊರಗಡೆ ಇದ್ದಾರೆ.

ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಅವರನ್ನು ಜೂನ್ 15, 2016ರಂದು ಹತ್ಯೆ ಮಾಡಲಾಗಿತ್ತು. ನಗರದ ಮಧ್ಯ ಭಾಗವಾಗಿರುವ ಸಪ್ತಾಪುರದಲ್ಲಿರುವ ಉದಯ್ ಜಿಮ್ ಅನ್ನು ಯೋಗೇಶಗೌಡ ಅವರು ತಮ್ಮ ಅಣ್ಣನ ಹೆಸರಿನಲ್ಲಿ ನಡೆಸುತ್ತಿದ್ದರು. ಅಲ್ಲಿ ಬೆಳಗ್ಗೆ ಯುವತಿಯರಿಗೆ ತರಬೇತಿ ನೀಡಲಾಗುತ್ತಿತ್ತು. ನಂತರ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು.
ಹೊಸ ಇನ್ನೋವಾ ಕಾರಿನಲ್ಲಿ ಧಾರವಾಡ ಸಮೀಪದ ತಮ್ಮ ಸ್ವಗ್ರಾಮ ಗೋವನಕೊಪ್ಪದಿಂದ ನಿತ್ಯ ತಮ್ಮ ಜಿಮ್ ಗೆ ಬರುತ್ತಿದ್ದ ಯೋಗೇಶ್ ಗೌಡ ಕಾರಿಗೆ ಇನ್ನು ನಂಬರ್ ಕೂಡ ಬಂದಿರಲಿಲ್ಲ. ಕಾರಿನಲ್ಲಿ ಜಿಮ್ ಗೆ ಬಂದ ಯೋಗೇಶ ಗೌಡ ಪೇಪರ್ ಓದುತ್ತಾ ಕುಳಿತುಕೊಂಡ ಸಮಯದಲ್ಲಿ ನಾಲ್ವರು ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಲು ಬಂದಿದ್ದರು. ತಕ್ಷಣ ಓಡಿ ಹೋಗಲು ಯತ್ನಿಸಿದಾಗ ಬಲಗೈಗೆ ಮಚ್ಚಿನಿಂದ ಕೊಚ್ಚಿದ್ದರು. ನಂತರ ತಮ್ಮ ಜಿಮ್ ನಲ್ಲಿ ಓಡಿದ ಯೋಗೇಶನನ್ನು ಬೆನ್ನತ್ತಿದ ದುಷ್ಕರ್ಮಿಗಳು ಮಚ್ಚಿನಿಂದ ತಲೆಯ ನೆತ್ತಿಯ ಮೇಲೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿದ್ದರು.
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹೆಸರು ಕೂಡಾ ತಳಕು ಹಾಕಿಕೊಂಡಿತ್ತು.












Click it and Unblock the Notifications