ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ
ಮಹಾದೇವಿಯ ಕಂಕುಳಲ್ಲಿ ಕುಳಿತ ಮೂರು ವರ್ಷದ ಕಂದಮ್ಮ ಪ್ರತಿಬಾರಿ ಹನುಮಂತಪ್ಪನ ಛಾಯಾಚಿತ್ರವನ್ನು ತೋರಿಸಿ 'ಅಪ್ಪಾ' ಎಂದು ಮುಗ್ಧವಾಗಿ ಕರೆದಾಗಲೆಲ್ಲ ಮಹಾದೇವಿಯ ಕರುಳು ಕಿತ್ತುಬರುತ್ತದೆ, ಕಣ್ಣಲ್ಲಿ ನೀರಪೊರೆ ಪ್ರಪಾತವಾಗಲು ಹಾತೊರೆಯುತ್ತದೆ.
ಹುಬ್ಬಳ್ಳಿ, ಫೆಬ್ರವರಿ 21 : "ಬೇಕಿದ್ದರೆ ನೆಲ ಗುಡಿಸಿ ಒರೆಸುವುದಕ್ಕೂ ನಾನು ಸಿದ್ಧ. ಆದರೆ ನನಗೊಂದು ಕೆಲಸ ಕೊಡಿ, ನಾನು ಗೌರವದಿಂದ ಬದುಕಬಯಸುತ್ತೇನೆ..." ಇವು ಕಂಗಳಲ್ಲಿ ಕಂಬನಿ ತುಂಬಿಕೊಂಡು ಮಹಾದೇವಿ ಹೃದಯ ಮಿಡಿಯುವಂತೆ ಆಡುವ ನೋವಿನ ಮಾತುಗಳು.
ಆಕೆ ಫೆಬ್ರವರಿ 11ರಂದು ಹುತಾತ್ಮನಾದ ಹನುಮಂತಪ್ಪ ಕೊಪ್ಪದನ ಮಡದಿ. ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹನುಮಂತಪ್ಪ ಸಿಲುಕಿ ಪವಾಡಸದೃಶವಾಗಿ ಪಾರಾಗಿ ಬಂದರೂ, ಜೀವನದೊಂದಿಗೆ ಹೋರಾಡಿ ಪ್ರಾಣ ಕಳೆದುಕೊಂಡ ನಂತರ ಮಹಾದೇವಿ ಜೀವನ ಎಂದಿನಂತಿಲ್ಲ.
ಮಹಾದೇವಿಯ ಕಂಕುಳಲ್ಲಿ ಕುಳಿತ ಮೂರು ವರ್ಷದ ಕಂದಮ್ಮ ಪ್ರತಿಬಾರಿ ಹನುಮಂತಪ್ಪನ ಛಾಯಾಚಿತ್ರವನ್ನು ತೋರಿಸಿ 'ಅಪ್ಪಾ' ಎಂದು ಮುಗ್ಧವಾಗಿ ಕರೆದಾಗಲೆಲ್ಲ 27 ವರ್ಷದ ಮಹಾದೇವಿಯ ಕರುಳು ಕಿತ್ತುಬರುತ್ತದೆ, ಕಣ್ಣಲ್ಲಿ ನೀರಪೊರೆ ಪ್ರಪಾತವಾಗಲು ಹಾತೊರೆಯುತ್ತಿರುತ್ತದೆ. [ವೀರಯೋಧ ಹನುಮಂತಪ್ಪ ಪತ್ನಿಗೆ ಇನ್ನೂ ಸಿಕ್ಕಿಲ್ಲ ಉದ್ಯೋಗ]
ಹನುಮಂತಪ್ಪ ಸತ್ತಾಗ ಮಹಾದೇವಿಗೆ ಸಾಂತ್ವನ ಹೇಳಲು ಬಂದ ರಾಜಕಾರಣಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಲೆಕ್ಕವೇ ಇಲ್ಲ. ಹಲವಾರು ಭರವಸೆಗಳನ್ನು ನೀಡಲಾಯಿತು. ಆದರೆ, ಕೆಲವೇ ಕೆಲವು ಭರವಸೆಗಳು ಮಾತ್ರ ಈಡೇರಿವೆ. ಉಳಿದವು ಹೇಳಿದವರ ನೆನಪಿನಲ್ಲಿ ಉಳಿದಿಲ್ಲ. ಕರ್ನಾಟಕ ಸರಕಾರವೇನೋ ಹೇಳಿದ್ದಷ್ಟು ಹಣ ಮತ್ತು ಒಂದಿಷ್ಟು ಜಮೀನನ್ನು ನೀಡಿದೆ. ಆದರೆ, ಇದರಿಂದ ಮಹಾದೇವಿಯ ಜೀವನ ಹಸನಾಯಿತೆ? [ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ]
ಒಂಟಿಯಾಗಿ ಬಾಳುವೆ ಮಾಡುವುದು ಸುಲಭವಲ್ಲ
"ಒಂಟಿ ತಾಯಿಯಾಗಿ ಮಗುವಿನ ಪಾಲನೆ ಮಾಡುವುದು ಅಷ್ಟು ಸುಲಭವಲ್ಲ. ನನ್ನ ಗಂಡ ಬದುಕಿದ್ದರೆ ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ಎಲ್ಲ ಪ್ರೀತಿಯನ್ನು ಮಗಳಿಗೆ ಧಾರೆಯೆರೆಯುತ್ತಿದ್ದೇನೆ. ಆಕೆಗೆ ಉತ್ತೇಜನ ನೀಡಲು ಯೋಧರ ಸಾಹಸ, ತ್ಯಾಗ, ಹೋರಾಟದ ಕಥೆಗಳನ್ನು ಹೇಳುತ್ತಿರುತ್ತೇನೆ" ಎಂದು ಮಹಾದೇವಿ ಒನ್ಇಂಡಿಯಾ ಜೊತೆ ತನ್ನ ಅನಿಸಿಕೆಗಳನ್ನು ಹಂಚಿಕೊಂಡಳು.[ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]
ನೆಲವನ್ನು ಒರೆಸುವ ಕೆಲಸವಿದ್ದರೂ ಚಿಂತೆಯಿಲ್ಲ
"ನನಗೊಂದು ಕೆಲಸ ಕೊಡಿ. ಬೇಕಿದ್ದರೆ ನೆಲವನ್ನು ಒರೆಸುವುದಿದ್ದರೂ ಚಿಂತೆಯಿಲ್ಲ. ಅನೇಕ ಅಧಿಕಾರಿಗಳು ಕರೆ ಮಾಡಿ ಖಂಡಿತವಾಗಿಯೂ ಕೆಲಸ ಕೊಡುತ್ತೇವೆ ಎಂದಿದ್ದಾರೆ. ಆದರೆ ಒಂದು ವರ್ಷದಿಂದ ಏನೂ ಆಗಿಲ್ಲ. ನನಗೆ ಅಲೆದಾಡಿ ನಿಜವಾಗಿಯೂ ಸುಸ್ತಾಗಿದೆ. ಗೌರವದಿಂದ ಬದುಕಲೊಂದು ಅವಕಾಶ ಮಾಡಿಕೊಡಿ" ಎಂದು ಮಹಾದೇವಿ ಗೋಗರೆಯುತ್ತಾರೆ.[ಉದ್ಯೋಗಕ್ಕೆ ವೀರ ಯೋಧ ಹನುಮಂತಪ್ಪ ಪತ್ನಿ ಮನವಿ]
ನಿಂತಲ್ಲೇ ನಿಂತಿರುವ ಹನುಮಂತಪ್ಪ ಸ್ಮಾರಕ
ಇನ್ನು ಹನುಮಂತಪ್ಪನ ನೆನಪಿಗೆಂದು ನಿರ್ಮಿಸಲಾಗುತ್ತಿರುವ ಅವರ ಹುಟ್ಟೂರಿನಲ್ಲಿ ಸ್ಮಾರಕಕ್ಕೆ ಕೆಲ ವಸ್ತುಗಳೇನೋ ಬಂದುಬಿದ್ದಿವೆ. ಆದರೆ, ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಸ್ಮಾರಕಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಹಣವನ್ನೇನೋ ಬಿಡುಗಡೆ ಮಾಡಲಾಗಿದೆ, ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನೂ ಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸ್ಮಾರಕ ಏಕೆ ಇನ್ನೂ ನಿರ್ಮಾಣವಾಗಿಲ್ಲ ಎಂಬುದು ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಸಿದ್ದರಾಮಯ್ಯ ಹಣ ನೀಡಿದ್ದು ಶ್ಲಾಘನೀಯ
ಸಿದ್ದರಾಮಯ್ಯ ಸರಕಾರ ಮಾತು ಕೊಟ್ಟಂತೆ 25 ಲಕ್ಷ ರು. ಪರಿಹಾರ ಹಣ ಮತ್ತು ಜಮೀನನ್ನು ನೀಡಿರುವುದು ಶ್ಲಾಘನೀಯ. ಆದರೆ, ಅವರಿಗೆ ವಾಗ್ದಾನ ಕೊಟ್ಟಂತೆ ಸರಕಾರಿ ಕೆಲಸ ನೀಡದಿರುವುದು ನಿಜಕ್ಕೂ ದುರಾದೃಷ್ಟಕರ. ಅಧಿಕಾರಿಗಳು ಕೆಲಸ ನೀಡುವ ಜವಾಬ್ದಾರಿ ಕೇಂದ್ರ ಸರಕಾರದ್ದು ಎಂದು ಕೈಜಾರಿಸಿಕೊಳ್ಳುತ್ತಿದ್ದಾರೆ. ಸತ್ಯ ಸಂಗತಿಯೇನೆಂದರೆ, ಸಿದ್ದರಾಮಯ್ಯನವರು ಕೂಡ ಕೆಲಸ ಕೊಡಿಸುತ್ತೇನೆಂದೂ ವಾಗ್ದಾನ ನೀಡಿದ್ದರು.
ದೇಶ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವೆ?
"ರಾಜಕೀಯ ಪಕ್ಷಗಳಿಗೆ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವುದು ಅತ್ಯಂತ ಸಹಜ. ಆದರೆ, ಇದೇ ರೀತಿ ಯೋಧನೂ ಮಾಡಿದರೆ? ಆಗ ಯಾರ ಮೇಲೆ ಆರೋಪ ಹೊರಿಸುತ್ತಾರೆ? ಸೈನಿಕರು ಹೀಗೆ ಆಡಲು ಶುರು ಮಾಡಿದರೆ ದೇಶ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವೆ? ಸೈನಿಕ ನಾನು ದೇಶಕ್ಕಾಗಿ ಅಲ್ಲ, ರಾಜ್ಯಕ್ಕಾಗಿ ಸೇವೆ ಮಾಡುತ್ತೇನೆ ಎಂದರೆ ರಾಜ್ಯಗಳ ಗತಿಯೇನು? ನಮ್ಮ ಜೀವನದ ಜೊತೆ ಆಟವಾಡುವುದು ಈ ಪ್ರಶ್ನೆಗಳಿಗೆ ಉತ್ತರವಲ್ಲ" ಎಂದು ಅವರು ಬೇಜವಾಬ್ದಾರಿಯುವ ಹೇಳಿಕೆಗಳಿಗಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ನನ್ನ ಬಳಿ ದೇವರಿದ್ದಾನೆ
"ನನ್ನ ಬಳಿ ದೇವರಿದ್ದಾನೆ. ನನ್ನ ಗಂಡ ಇನ್ನೂ ಜೀವಂತವಾಗಿದ್ದಾರೆ, ಪ್ರತಿಕ್ಷಣವೂ ನನ್ನೊಂದಿಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಲವಾರು ತೊಂದರೆ ಅನುಭವಿಸಿದ್ದೇನೆ, ಅವನ್ನು ಎದುರಿಸಿದ್ದೇನೆ. ಈ ಎಲ್ಲ ತೊಂದರೆಗಳು ನನ್ನ ಸ್ವಂತದ್ದವು. ಆದರೆ, ಸ್ವತಂತ್ರವಾಗಿ ಜೀವಿಸಿದರೆ ಈ ಎಲ್ಲ ತೊಂದರೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ. ಒಂದು ಕೆಲಸವಿದ್ದರೆ ನನ್ನ ಮನಸ್ಸು ಆ ಕೆಲಸದಲ್ಲಿ ಮುಳುಗಿರುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ" ಎಂದು ಮಹಾದೇವಿ ನಿಟ್ಟುಸಿರು ಬಿಡುತ್ತಾರೆ.
ಕೆಟ್ಟ ವ್ಯವಸ್ಥೆ ನೋಡಿ ಬೇಸತ್ತಿದ್ದಾರೆ ಮಹಾದೇವಿ
ಮಹಾದೇವಿಗೆ ಬೇಕಾಗಿರುವುದು, ಗೌರವದಿಂದ ಜೀವನ ಮಾಡಲೊಂದು ಸರಕಾರಿ ಕೆಲಸ. ಆದರೆ, ಕೆಟ್ಟ ವ್ಯವಸ್ಥೆ ನೋಡಿ ಮಹಾದೇವಿ ನಿಜಕ್ಕೂ ಬೇಸರಗೊಂಡಿದ್ದಾರೆ. ಹಲವರ ಮುಖಾಂತರ ಕೆಲಸ ಪಡೆಯಲು ಪ್ರಯತ್ನ ಮಾಡಿದರೂ ಅದು ಕೂಡಿಬಂದಿಲ್ಲ. ಯಾರ ಸಾಂತ್ವನದ ಮಾತುಗಳು ಮನಸ್ಸಿಗೆ ನೆಮ್ಮದಿ ನೀಡುವುದಿಲ್ಲ. ಅಧಿಕಾರಯುತವಾಗಿ ಆಕೆಗೆ ಸಿಗಬೇಕಾದದ್ದು ಸಿಗಲೇಬೇಕು.