'ಎಲ್ಲಾದರೂ ಸೋಲುವ ಸಿದ್ದರಾಮಯ್ಯ ಎರಡೇನು 3 ಕ್ಷೇತ್ರದಲ್ಲಿ ನಿಲ್ಲಲಿ'
ಹುಬ್ಬಳ್ಳಿ, ಏಪ್ರಿಲ್ 14 : "ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಲ್ಲಾ, ಎರಡಲ್ಲ, ಇನ್ನೊಂದು ಕಡೆ ಸ್ಪರ್ಧೆ ಮಾಡಲಿ. ಅವರು ಸ್ಪರ್ಧೆ ಮಾಡುವ ಎಲ್ಲ ಕ್ಷೇತ್ರದಲ್ಲಿ ಸೋಲುವುದು ಖಚಿತ" ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯ ಕೇಂದ್ರ ಅಂಚೆ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದಲೇ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಹೆಚ್ಚಾಗಿದೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮಗ ಯತೀಂದ್ರ ಸೋಲುವುದು ಗ್ಯಾರಂಟಿ ಎಂದರು.
'ಮೋದಿ, ಅಮಿತ್ ಶಾ ಮುಂದೆ ಸಿದ್ದರಾಮಯ್ಯ ಚಿಕ್ಕಬಾಲಕ ಇದ್ದಂತೆ'
ಈ ಹಿಂದೆ ಮಾಡಿದ ಸಮೀಕ್ಷೆಗಳು ಯಾವುದೂ ಸತ್ಯವಾಗಿಲ್ಲ. ಈಗ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೂ ಹಾಗೇ ಇದೆ. ಇನ್ನು ಈ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತಿಪ್ಪೇಸ್ವಾಮಿ ಪಕ್ಷೇತರರಾಗಿ ಸ್ಪರ್ಧೆ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಆಶೀರ್ವಾದದಿಂದ ತಿಪ್ಪೇಸ್ವಾಮಿ ಶಾಸಕರಾಗಿದ್ದರು. ಅಲ್ಲಿ ಶ್ರೀರಾಮುಲು ವರ್ಚಸ್ಸು ಹೆಚ್ಚಿದೆ. ಪಕ್ಷದ ನಿರ್ಧಾರಕ್ಕೆ ತಿಪ್ಪೇಸ್ವಾಮಿ ಬದ್ಧರಾಗಿರಬೇಕು. ಒಂದು ಬಾರಿ ಟಿಕೆಟ್ ನಿರ್ಧಾರವಾದ ಮೇಲೆ ಬದಲಾವಣೆ ಇಲ್ಲ ಎಂದರು.
ತಿಪ್ಪೇಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸುವುದು ಅಥವಾ ಸ್ಪರ್ಧೆ ಮಾಡದಿರುವುದು ಅವರಿಗೆ ಬಿಟ್ಟದ್ದು. ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ತಿಳಿಸಿದರು.
ಸೀಮಾ ಮಸೂತಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ನಾನು ಖುದ್ದಾಗಿ ಭೇಟಿಯಾಗಿ ಮನವೊಲಿಸಲು ಮುಂದಾಗಿದ್ದೇನೆ. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ನಮ್ಮ ಪಕ್ಷಕ್ಕೆ ಹೊಡೆತ ಬೀಳುವುದಿಲ್ಲ. ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.