ವಿನಯ್ ಕುಲಕರ್ಣಿ ಧರ್ಮ ಮುಖವಾಡದ ಮೂಲಕ ದಾರಿ ತಪ್ಪಿಸುತ್ತಿದ್ದಾರೆ
ಹುಬ್ಬಳ್ಳಿ, ಡಿಸೆಂಬರ್ 05 : ಸಚಿವ ವಿನಯ್ ಕುಲಕರ್ಣಿ ಧರ್ಮ ಮುಖವಾಡ ಮೂಲಕ ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ ಆರೋಪ ಮಾಡಿದರು.
ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡದ ಬಗ್ಗೆ ಅನುಮಾನ ಇದೆ. ಹೀಗಾಗಿ ವಿನಯ್ ಕುಲಕರ್ಣಿ ಧರ್ಮ ಮುಖವಾಡ ಮೂಲಕ ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್, ಸೋಮಣ್ಣ ಬೇವಿನ ಮರದ, ಅಮೃತ ದೇಸಾಯಿ ಜಂಟಿ ಸುದ್ದಿಗೋಷ್ಟಿಯಲ್ಲಿ ಗಂಭೀರವಾದ ಆರೋಪ ಮಾಡಿದರು.

ಧರ್ಮ ರಾಜಕಾರ ಮಾಡುವದನ್ನು ಬಿಟ್ಟು ವಿನಯ್ ಕುಲಕರ್ಣಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಅವರ ವಿರುದ್ದ ತನಿಖೆಯನ್ನು ನಡೆಸಬೇಕು. ಅದರ ಜೊತೆಗೆ ಸಂಧಾನಕ್ಕೆ ಯತ್ನಿಸಿದ ಡಿವೈಎಸ್ಪಿ ಸುಲ್ಪಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಕರಣವನ್ನು ದಾರಿ ತಪ್ಪಿಸಲು ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಈ ಮೂಲಕ ಪ್ರಕರಣ ತಿರುಚುವ ಕುತಂತ್ರ ನಡೆದಿದೆ. ಬೇರೆ ಬೇರೆಯವರನ್ನ ಕರೆತಂದು ಲಿಂಗಾಯತ ಟೋಪಿ ಹಾಕಿ ಜೋಶಿ ವಿರುದ್ದ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇಂದು ಪ್ರತಿಭಟನೆಯಲ್ಲಿ ಭಾಗಿಯಾದವರು ಲಿಂಗಾಯತ ರಲ್ಲ ಎಂದರು.
ಇದೇ ವೇಳೆ ಮಾತನಾಡಿದ ಅಮೃತ ದೇಸಾಯಿ, ವಿನಯ್ ಕುಲಕರ್ಣಿ ವಿರುದ್ದ ನಮ್ಮ ಕಾನೂನು ಹೋರಾಟ ಆರಂಭವಾಗಿದೆ. ಈಗಾಗಲೇ ವಿನಯ್ ಕುಲಕರ್ಣಿ ವಿರುದ್ಧ ಗುರುನಾಥ ಗೌಡ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಇದುವರೆಗೂ ದೂರು ದಾಖಲಿಸಿಕೊಂಡಿಲ್ಲ. ನಾನು ವಿನಯ್ ಕುಲಕರ್ಣಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ತಯಾರಿ ನಡೆಸಿದ್ದೇನೆ ಎಂದರು.












Click it and Unblock the Notifications