ಮೂರು ಸಾವಿರ ಮಠದ ಸ್ವಾಮೀಜಿ ವಿರುದ್ಧ ಗುಡುಗಿದ ವಿಜಯ ಸಂಕೇಶ್ವರ
ಹುಬ್ಬಳ್ಳಿ, ಫೆಬ್ರವರಿ 17: ಉತ್ತರ ಕರ್ನಾಟಕದ ಪ್ರಸಿದ್ದ ಮಠವಾದ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧೀಪತಿ ವಿವಾದ ಮತ್ತೆ ಸದ್ದು ಮಾಡಿದೆ. ಕಳೆದ ಮೂರು ವರ್ಷಗಳ ಹಿಂದೆ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈಗ ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ವಿಜಯ ಸಂಕೇಶ್ವರ ಅವರೇ ಮೂರು ಸಾವಿರ ಮಠದ ಪೀಠಾಧಿಪತಿ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಮೂರುಸಾವಿರ ಮಠದ ಪ್ರಸ್ತುತ ಸ್ವಾಮೀಜಿ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ (ಮೂಜಗು) ತಮ್ಮ ಸ್ವಾರ್ಥಕ್ಕಾಗಿ ಮಠವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ. ಅಳುವುದು, ಮಠ ಬಿಟ್ಟು ಓಡಿ ಹೋಗುವುದಷ್ಟೇ ಅವರಿಗೆ ಗೊತ್ತು' ಎಂದು ಆರೋಪ ಮಾಡಿದ್ದಾರೆ.
ಮತ್ತೆ ತಾರಕಕ್ಕೇರಿದ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ
"ಸ್ವಾಮೀಜಿ ಮಠದ ಆಸ್ತಿಗಳನ್ನು ಸ್ವಂತಕ್ಕಾಗಿ ಮಾರಿರುವ ದಾಖಲೆಗಳಿವೆ. ಹೀಗಾಗಿ ಮಠದ ಅಭಿವೃದ್ದಿಗಾಗಿ ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗುವದು ಒಳ್ಳೆಯದು. ಅವರಲ್ಲದೇ ಬೇರೆಯವರನ್ನು ಉತ್ತರಾಧಿಕಾರಿ ಮಾಡಿದರು. ನನಗೆ ವೈಯಕ್ತಿಕವಾಗಿ ಅಭ್ಯಂತರವಿಲ್ಲ ಎಂದರು ಎಂದು ಸ್ವಾಮೀಜಿಯನ್ನು ಮಠದಿಂದ ಹೊರಹಾಕಬೇಕು' ಎಂದು ಹೇಳಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸುಳ್ಳು ಆರೋಪ
"ಮೂರು ಸಾವಿರ ಮಠದ ಶಾಕಾ ಮಠವಾದ ಹಾನಗಲ್ ಬಳಿಯ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಅನವಶ್ಯಕವಾಗಿ ಕಳಂಕಿತರೆಂದು ಬಿಂಬಿಸಲಾಗಿದೆ. ದಿಂಗಾಲೇಶ್ವರ ಸ್ವಾಮೀಜಿಯನ್ನು ಫೆಬ್ರವರಿ 23ಕ್ಕೆ ಮಠದೊಳಗೆ ಕರೆದುಕೊಳ್ಳಲಿ. ಮೂಜಗು ಸ್ವಾಮೀಜಿ ವೀರಶೈವ ಸಮಾಜಕ್ಕೆ ಇದೊಂದು ಅನುಕೂಲ ಮಾಡಲಿ' ಎಂದು ಒತ್ತಾಯ ಮಾಡಿದ್ದಾರೆ.
ಮೂಜಗು ದಿಂಗಾಲೇಶ್ವರ ಮಠ ಸೇರಲಿ
"ಸ್ವಾಮೀಜಿಗಳು ಪೀಠಾಧಿಪತಿ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದರಿಂದ ಇರುವ ಸತ್ಯ ಹೇಳಲು ಬಂದಿದ್ದೇನೆ. ಮೂಜಗು ಸ್ವಾಮೀಜಿ ಉತ್ತರಾಧಿಕಾರಿ ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಬೇಕು. ಮೂಜಗು ಮತ್ತು ದಿಂಗಾಲೇಶ್ವರ ಮಠ ಸೇರಿ ಅಭಿವೃದ್ಧಿ ಮಾಡಬೇಕು' ಎಂದು ಒತ್ತಾಯ ಮಾಡಿದ್ದಾರೆ.
ದಿಂಗಾಲೇಶ್ವರ ಶ್ರೀಯನ್ನು ಕರೆ ತರಬೇಕು
"ಮೂಜಗು ಸ್ವಾಮೀಜಿ ಬಂದ ಮೇಲೆ ಹುಬ್ಬಳ್ಳಿ ಮೂರು ಸಾವಿರ ಮಠದ ಚಟುವಟಿಕೆಗಳು ಕಡಿಮೆಯಾಗಿವೆ. ಅವರು ಕೋರ್ಟ್ ಕೆಲಸಗಳಿಗಾಗಿ ಹಣಕಾಸಿನ ಸಾಲ ಮಾಡಿದ್ದರು. ಅದನ್ನು ದಿಂಗಾಲೇಶ್ವರ ಸ್ವಾಮೀಜಿ ಹಣಕೊಟ್ಟು ಬಗೆಹರಿಸಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಬಾಲೆಹೊಸೂರಿನಲ್ಲಿ ಉತ್ತಮವಾಗಿ ಮಠ ನಡೆಸುತ್ತಿದ್ದಾರೆ. ಅವರನ್ನೇ ಸಮಾಜದ ಮುಖಂಡರು ಹುಬ್ಬಳ್ಳಿಗೆ ಕರೆ ತರಬೇಕು' ಎಂದು ಹೇಳಿದರು.
ದಿಂಗಾಲೇಶ್ವರ ಶ್ರೀ ಬಗ್ಗೆ ಗೊತ್ತು
"ದಿಂಗಾಲೇಶ್ವರರನ್ನು ಉತ್ತರಾಧಿಕಾರಿ ಮಾಡಲು ಹಾಲಿ ಮೂಜಗು ಸ್ವಾಮೀಜಿಗಳು ನಿರ್ಧರಿಸಿದ್ದರು. ಇದನ್ನು ಮಠದ ಪ್ರಮುಖರಿಗೆ ತಿಳಿಸಿದ್ದರು. ಮೂಜಗು ಸ್ವಾಮೀಜಿ ಆಗ್ರಹದಂತೆ ನಾವೆಲ್ಲಾ ದಿಂಗಾಲೇಶ್ವರರನ್ನು ಉತ್ತರಾಧಿಕಾರಿ ಮಾಡಲು ಒಪ್ಪಿದ್ದೆವು. ಅದರಂತೆ ಕೋರ್ಟ್ ಅಫಿಡವಿಟ್ ಮಾಡಿ 52 ಜನ ಪ್ರಮುಖರು ಸಹಿ ಮಾಡಿದ್ದೇವೆ. ಇದಾದ ನಂತರ ದಿಂಗಾಲೇಶ್ವರರ ಮೇಲೆ ಹಲವು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಈ ಬೆಳವಣಿಗೆಯಲ್ಲಿ ಮೂಜಗು ಪಾತ್ರ ಮಠದಲ್ಲಿರುವವರಿಗೆ ಗೊತ್ತು' ಎಂದು ವಿಜಯ್ ಸಂಕೇಶ್ವರ ಹೇಳಿದ್ದಾರೆ.