ಹುಬ್ಬಳ್ಳಿ ರೈಲು ನಿಲ್ದಾಣದ 3ನೇ ದ್ವಾರ ಲೋಕಾರ್ಪಣೆ: ನಿಜಾಮುದ್ದೀನ್ ರೈಲಿಗೆ ಗ್ರೀನ್ ಸಿಗ್ನಲ್!
ಹುಬ್ಬಳ್ಳಿ, ಅಕ್ಟೋಬರ್ 11: ಶ್ರೀ ಸದ್ಗುರು ಸಿದ್ಧಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗಿರುವ 3ನೇ ಪ್ರವೇಶ ದ್ವಾರವನ್ನು ಮಂಗಳವಾರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ಜೊತೆಗೆ ಹುಬ್ಬಳ್ಳಿಯಿಂದ ದೆಹಲಿಯ ನಿಜಾಮುದ್ದೀನ್ ರೈಲಿಗೆ ಹಸಿರು ಬಾವುಟ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶ ದ್ವಾರವು ಇಲ್ಲಿಯ ಜನರ ಬಹು ದಿನದ ಬೇಡಿಕೆಯಾಗಿತ್ತು. ಅತ್ಯಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಪ್ರತಿ ದಿನ ಇಲ್ಲಿಗೆ ಭೇಟಿ ನೀಡುತ್ತಿದ್ದು, ಈ ಜನ ದಟ್ಟಣೆಯ ನಿಯಂತ್ರಣದಲ್ಲಿ ಈ ಹೊಸ ದ್ವಾರವು ಪ್ರಮುಖ ಪಾತ್ರ ವಹಿಸಲಿದೆ. ಬೆಂಗಳೂರು ಹಾಗೂ ಯಶವಂತಪುರ ರೈಲು ನಿಲ್ದಾಣ ಹೊರತುಪಡಿಸಿದರೆ, 3ನೇ ಪ್ರವೇಶದ್ವಾರ ತಲೆ ಎತ್ತಿರುವುದು ಹುಬ್ಬಳ್ಳಿಯಲ್ಲಿ ಮಾತ್ರ ಎಂಬುದು ಮತ್ತೊಂದು ವಿಶೇಷತೆಯಾಗಿದೆ.
1505 ಮೀಟರ್ ಉದ್ದದ ಪ್ಲಾಟ್ ಫಾರಂ ಹೊಂದುವ ಮೂಲಕ ವಿಶ್ವದ ಅತ್ಯಂತ ಉದ್ದನೆಯ ಪ್ಲಾಟ್ ಫಾರಂ ಹೊಂದಿರುವ ಖ್ಯಾತಿಗೆ ಕೂಡ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಪಾತ್ರವಾಗಿದೆ. ಇದೀಗ 3ನೇ ಪ್ರವೇಶದ್ವಾರದಿಂದ ನೇರವಾಗಿ ಈ ನಿಲ್ದಾಣಕ್ಕೆ ಪ್ರವೇಶ ಪಡೆಯುಬಹುದಾಗಿದ್ದು, ಉದ್ದನೆಯ ಈ ಪ್ಲಾಟ್ ಫಾರಂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಪ್ಲಾಟ್ ಫಾರಂ ಸಂಖ್ಯೆಗಳು ಕೂಡ 5ರಿಂದ 8ಕ್ಕೆ ಏರಿದೆ ಹಾಗೂ 7 ಮತ್ತು 8 ನೇ ಪ್ಲಾಟ್ ಫಾರಂ ಸಂಪರ್ಕಿಸಲು ಸಬ್ ವೇ ನಿರ್ಮಿಸಲಾಗಿದೆ.

ನಿಜಾಮುದ್ದೀನ್ ಎಕ್ಸ್ಪ್ರೆಸ್ಗೆ ಚಾಲನೆ:
ಹಿಂದೆ ಇದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಲಿಂಕ್ ರೈಲನ್ನು ಸ್ಥಗಿತಗೊಳಿಸಿದ್ದರಿಂದ ಅವಳಿ ನಗರದ ರೈಲು ಪ್ರಯಾಣಿಕರಿಗೆ ತೊಂದರೆಯಾಗಿತ್ತು, ಅಂದಿನಿಂದ ಈ ಮಾರ್ಗದ ರೈಲು ಪುನರಾರಂಭಿಸುವಂತೆ ರೈಲ್ವೇ ಸಚಿವಾಲಯಕ್ಕೆ ಒತ್ತಾಯಿಸಲಾಗಿತ್ತು. ಈಗ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಹುಬ್ಬಳ್ಳಿಯಿಂದ ನೇರವಾಗಿ ನವದೆಹಲಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್ ಸೇರಿದಂತೆ ಇತರರು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.












Click it and Unblock the Notifications