ನವೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ
ಹುಬ್ಬಳ್ಳಿ, ಅಕ್ಟೋಬರ್ 1: ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಹಾಗೂ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಇದೇ ನವೆಂಬರ್ 5ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಂಬಂಧ ಇಂದು ಅಂದರೆ ಅಕ್ಟೋಬರ್ 1ರಂದು ಹುಬ್ಬಳ್ಳಿಯಲ್ಲಿ ಚಿಂತನಾ ಸಭೆಯನ್ನು ಆಯೋಜನೆ ಮಾಡಲಾಗಿದೆ.
ಈ ಸಂಬಂಧ ಶನಿವಾರ ವಿಶ್ವ ಲಿಂಗಾಯತ ಮಹಾಸಭಾ ರಾಜ್ಯ ಸಂಚಾಲಕರಾದ ಚಿಂತಾಮಣಿ ಸಿಂದಗಿಯವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
"ಭಾನುವಾರ ಹುಬ್ಬಳ್ಳಿಯ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಚಿಂತನಾ ಸಭೆಯನ್ನು ಆಯೋಜನೆ ಮಾಡಲಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ನೀರಾವರಿ ಸಚಿವರಾದ ಎಂ ಬಿ ಪಾಟೀಲ್, ಧಾರವಾಡ ಜಿಲ್ಲಾ ಉಸ್ತುವಾರಿ ವಿನಯ ಕುಲಕರ್ಣಿ ಸೇರಿದಂತೆ ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರು ಈ ಚಿಂತನಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ," ಎಂದು ಚಿಂತಾಮಣಿ ಸಿಂದಗಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಚಿಂತನಾ ಸಭೆಯಲ್ಲಿ ಪ್ರತ್ಯೇಕ ಧರ್ಮ ಹೋರಾಟದ ಮುಂದಿನ ಹಾದಿಯ ಬಗ್ಗೆ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ಅಲ್ಲದೆ ಈ ಹಿಂದೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆಸಿದ ಹಾಗೆ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ನವೆಂಬರ್ 5 ರಂದು ಬೃಹತ್ ಸಮಾವೇಶ ನಡೆಸಲಾಗುವುದು. ಎಲ್ಲಾ ರಾಜಕೀಯ ಮುಖಂಡರು ತಮ್ಮ ಪಕ್ಷ ಭೇದ ಮರೆತು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ," ಎಂದು ವಿವರ ನೀಡಿದ್ದಾರೆ.
ಇಂದು ನಡೆಯುವ ಚಿಂತನಾ ಸಭೆಯಲ್ಲಿ ಹುಬ್ಬಳ್ಳಿಯ ಸಮಾವೇಶದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಚಿಂತಾಮಣಿ ಸಿಂದಗಿಯವರು ತಿಳಿಸಿದ್ದಾರೆ.