ಹುಬ್ಬಳ್ಳಿಯಲ್ಲಿ ಶ್ರಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ 'ಶ್ರಮಿಕ ಸಂಜೀವಿನಿ'
ಹುಬ್ಬಳ್ಳಿ, ಸೆಪ್ಟೆಂಬರ್, 14: ನಗರದ ನ್ಯಾಯಾಲಯದ ಮುಂದೆ ಕಾರ್ಮಿಕ ಇಲಾಖೆಯಿಂದ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನವನ್ನು ಆರಂಭಿಸಲಾಗಿದೆ. ಸ್ಕೊಡ್ ವೆಸ್ ಸಂಸ್ಥೆ ಸಹಯೋಗದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲಾಗಿದೆ.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಆರ್.ಎಸ್. ಚಿನ್ನಣ್ಣವರ್, ಸದಸ್ಯ ಕಾರ್ಯದರ್ಶಿ ರಾಜಶೇಖರ್ ತಿಳಗಂಜಿ ಮತ್ತು ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಆರ್. ಪಾಟೀಲ್ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನಕ್ಕೆ ಚಾಲನೆ ನೀಡಿದರು.
ಚಿತ್ರದುರ್ಗ:ಕಟ್ಟಡ ಕಾರ್ಮಿಕರ ಆರೋಗ್ಯ ಸೇವೆಗೆ ಸಂಚಾರಿ ಆರೋಗ್ಯ ಕ್ಲಿನಿಕ್
ನಂತರ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಮಾತನಾಡಿ, "ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಂಡಿದ್ದೇವೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಕಾರ್ಮಿಕರು ಹಾಗೂ ಹೊಸದಾಗಿ ನೋಂದಣಿ ಮಾಡಿಸಿಕೊಂಡಿರುವ ಜಿಲ್ಲೆಯ 15 ಸಾವಿರ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ. ಈ ವಾಹನವು ಇಸಿಜಿ, ಕೋವಿಡ್ 19 ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇಲಾಖೆ ನಿರ್ದೇಶಿತ ಸೇರಿದಂತೆ ಇತರೆ ಆರೋಗ್ಯ ಸೇವೆಗಳನ್ನು ನೀಡಲಿದೆ," ಎಂದರು.
ಆರೋಗ್ಯ ಸೇವೆಗೆ ಚಾಲನೆ ನೀಡಲಾದ ವಾಹನ
ಧಾರವಾಡ ಘಟಕದ ಸ್ಕೊಡ್ ವೆಸ್ ಸಂಸ್ಥೆಯ ಯೋಜನಾ ಸಂಯೋಜನಾಧಿಕಾರಿ ಚಂದ್ರಶೇಖರ್ ಆಚಾರ್ಯ ಬಡಿಗೇರ ಮಾತನಾಡಿ, "ಜಿಲ್ಲೆಯಲ್ಲಿ ಎರಡು ಚಿಕಿತ್ಸಾ ವಾಹನಗಳು ಕಾರ್ಯನಿರ್ವಹಿಸಲಿವೆ. ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗಾಲಯ ತಜ್ಞರು, ಔಷಧ ವಿತರಣಾ ತಜ್ಞರು, ವೈದ್ಯಕೀಯ ಸಮಾಜ ಕಾರ್ಯಕರ್ತರು, ಚಾಲಕ, ಸಹಾಯಕ ಸಿಬ್ಬಂದಿಯನ್ನು ಘಟಕ ವಾಹನ ಹೊಂದಿರುತ್ತದೆ," ಎಂದರು.
ಕಾರ್ಮಿಕರಿಗೆ ಯಾವೆಲ್ಲ ಸೌಲಭ್ಯಗಳು ಸಿಗಲಿವೆ?
ನೋಂದಾಯಿತ ಕಾರ್ಮಿಕರಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳು ಮತ್ತು ಇತರೆ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಹ ಒದಗಿಸಲಿದೆ. ಆಧುನಿಕತೆಗೆ ತಕ್ಕಂತೆ ಬೆಡ್, ಆಕ್ಸಿಜನ್ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್, ಲ್ಯಾಬ್ ಪರಿಕರಗಳು, ಔಷಧಿಗಳು, ಬಿಪಿ ಟೆಸ್ಟ್, ಇಸಿಜಿ ಸೌಲಭ್ಯ, ರೆಫ್ರಿಜರೇಟರ್, ವೀಲ್ ಚೇರ್ ಸೇರಿದಂತೆ ಇತರೆ ಪ್ರಯೋಗಾಲಯ ಸಲಕರಣೆಗಳನ್ನು ಹೊಂದಿರುತ್ತದೆ.
ಆರೋಗ್ಯ ಸೇವೆಯ ನಿಗಧಿತ ಅವಧಿ
ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಹಾಗೂ ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೇವೆಯನ್ನು ನೀಡಲಿದೆ. ಕಾರ್ಮಿಕ ನೋಂದಾಯಿತ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೋರಿಸಿ ಚಿಕಿತ್ಸೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ನ್ಯಾಯಾಧೀಶರಿಗೆ ಚಿಕಿತ್ಸಾ ಘಟಕ ವಾಹನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇಲಾಖೆವಾರು ಅಧಿಕಾರಿಗಳು ಭಾಗಿ
ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ಎಸ್. ಶ್ವೇತಾ, ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ಹಿರಿಯ ಕಾರ್ಮಿಕ ನಿರೀಕ್ಷಕ ಅಶೋಕ್ ಒಡೆಯರ್, ಡಾ.ಶಿವಶಂಕರ್ ನರೇಗಲ್, ವೈದ್ಯಕೀಯ ಸಮಾಜ ಕಾರ್ಯಕರ್ತರು, ಆರೋಗ್ಯ ಸಹಾಯಕರು, ವಾಹನ ಚಾಲಕರು, ಹುಬ್ಬಳ್ಳಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು, ಹಿರಿಯ ಹಾಗೂ ಕಿರಿಯ ಶ್ರೇಣಿಯ ನ್ಯಾಯಾಧೀಶರು, ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು.