ಸರಕು ಸಾಗಣೆ ಕೇಂದ್ರವಾಗುತ್ತಿರುವ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಹುಬ್ಬಳ್ಳಿ, ಆಗಸ್ಟ್ 14: ಉತ್ತರ ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಗೆಂದೇ ಪ್ರತ್ಯೇಕ ಘಟಕ ತೆಗೆದುಕೊಳ್ಳುವ ದಿನಗಳು ಹತ್ತಿರದಲ್ಲಿವೆ ಎಂಬ ಮಹತ್ವದ ಸುದ್ದಿ ಹೊರಬಿದ್ದಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ಟ್ವಿಟ್ಟರ್ ಖಾತೆಯಿಂದ ನೀಡಲಾಗಿರುವ ಈ ಮಾಹಿತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮರು ಟ್ವೀಟ್ ಸಹ ಮಾಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ವಿಮಾನ ಸೇವೆ ಈಗಾಗಲೇ ಆರಂಭವಾಗಿದೆ. ಆದರೆ, ಸರಕುಗಳ ತಪಾಸಣೆ ಮತ್ತು ನಿರ್ವಹಣೆಗೆ ಈಗಿರುವ ಪ್ರಯಾಣಿಕರ ವಿಭಾಗದ ವ್ಯವಸ್ಥೆಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು. ಆದರೀಗ ವಿಮಾನ ನಿಲ್ದಾಣದ ಆವರಣದಲ್ಲೇ ಸರಕು ಸಾಗಣೆ ವಿಮಾನಗಳ ನಿರ್ವಹಣೆಗೆ ಪ್ರತ್ಯೇಕ ಟರ್ಮಿನಲ್ ರೂಪುಗೊಂಡಿದ್ದು, ಕೊನೆ ಹಂತದ ಪರಿಶೀಲನೆ ಮುಗಿದ ಕೂಡಲೇ ಇದು ಕಾರ್ಯಾರಂಭಗೊಳ್ಳಲಿದೆ.
ಪ್ರತ್ಯೇಕ ಸರಕು ಸಾಗಣೆ ಘಟಕ ಉತ್ತರ ಕರ್ನಾಟಕದ ಏರ್ ಕಾರ್ಗೊ ಕೇಂದ್ರ ಸ್ಥಾನವಾಗಿ ಮಹತ್ವ ಪಡೆಯಲಿದೆ. ಹುಬ್ಬಳ್ಳಿಯ ಸುತ್ತಮುತ್ತ ಅನೇಕ ಉದ್ದಿಮೆಗಳು ಆರಂಭವಾಗುತ್ತಿದ್ದು, ಈ ಮೊದಲು ಅವು ವಾಯುಯಾನದ ಮುಖಾಂತರ ಸರಕುಗಳನ್ನು ತರಿಸಿಕೊಳ್ಳಬೇಕಾಗಿ ಬಂದಾಗ ಹತ್ತಿರದ ಗೋವಾ ವಿಮಾನ ನಿಲ್ದಾಣಕ್ಕೆ ತರಿಸಿಕೊಂಡು ಅಲ್ಲಿಂದ ತಮ್ಮ ಸ್ಥಾನ ತಲುಪಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.
ಆದರೀಗ ಹುಬ್ಬಳ್ಳಿಯಲ್ಲೇ ಸರಕು ಸಾಗಣೆಯ ವಿಮಾನ ವ್ಯವಸ್ಥೆ ರೂಪುಗೊಳ್ಳುತ್ತಿರುವುದು ಉತ್ತರ ಕರ್ನಾಟಕ ಭಾಗದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಭಾರಿ ಅನುಕೂಲವಾಗಲಿದೆ. ಮುಂದುವರಿದು, ಈ ವ್ಯವಸ್ಥೆಯು ರೈತರ ಕೆಲ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕಿಸುವುದಕ್ಕೂ ಮುಂದಿನ ದಿನಗಳಲ್ಲಿ ಸಹಾಯವಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸುರಕ್ಷಿತ ಲ್ಯಾಂಡಿಂಗ್ಗೆ ಐಎಲ್ಎಸ್ ಕಾರ್ಯಾರಂಭ
ಹವಾಮಾನ ವೈಪರಿತ್ಯದಲ್ಲೂ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ಗೆ ಅನುಕೂಲವಾಗುವ ಐಎಲ್ಎಸ್ (ಇನ್ಸ್ಟ್ರೂಮೆಂಟಲ್ ಲ್ಯಾಂಡಿಂಗ್ ಸಿಸ್ಟಂ) ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಯ ಆರಂಭಿಸಿದೆ.
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಒಂದನೇ ಕೆಟಗರಿಯ ಐಎಲ್ಎಸ್ನ್ನು ಅಳವಡಿಸಿದೆ. ವಿಶ್ವದರ್ಜೆಯ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ರೂಪಸಿದ ಐಎಲ್ಎಸ್ ಇದಾಗಿದ್ದು, ಇಂದ್ರ ಏರ್ ನ್ಯಾವಿಗೇಶನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಒಟ್ಟಾರೆ 6.50 ಕೋಟಿ ರೂ. ವೆಚ್ಚದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲೇ ಐಎಲ್ಎಸ್ ಸಂಪೂರ್ಣವಾಗಿ ಅಳವಡಿಕೆಯಾಗಿತ್ತು.
ಆಗಲೇ ಐಎಲ್ಎಸ್ ಪರೀಕ್ಷೆಗಳೂ ನಡೆದಿದ್ದವು. ಜೂನ್ನಲ್ಲಿ ಪ್ರಾಯೋಗಿಕವಾಗಿ ಇದರ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಅದರೆ ಕೊರೊನಾ ಸೋಂಕು ಕಾರಣಕ್ಕಾಗಿ ಸಂಪೂರ್ಣ ಬಳಕೆ ವಿಳಂಬವಾಗಿತ್ತು. ಎಲ್ಲ ಪರವಾನಗಿ ದೊರೆತ ಬಳಿಕ ಇದೀಗ ಆ.12ರಿಂದ ಇದರ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಎಎಐ ರೇಡಿಯೊ ಕನ್ಸ್ಟ್ರಕ್ಷನ್ ಆ್ಯಂಡ್ ಡೆವಲಪ್ಮೆಂಟ್ ಯೂನಿಟ್ ಹಾಗೂ ಫ್ಲೈಟ್ ಇನ್ಸ್ಪೆಕ್ಷನ್ ಯುನಿಟ್ (ಆರ್ಸಿಡಿಯು, ಎಫ್ಐಯು) ತಂಡವು ಹುಬ್ಬಳ್ಳಿಯ ವಿಮಾನ ನಿಲ್ದಾಣದ ಸಿಎನ್ಎಸ್ (ಕಮ್ಯೂನಿಕೇಶನ್, ನ್ಯಾವಿಗೇಶನ್ ಆ್ಯಂಡ್ ಸರ್ವೈವಲೆನ್ಸ್) ತಂಡದ ಮುಖ್ಯಸ್ಥ ಎನ್.ಎಂ. ಮಂಜುನಾಥ ನೇತೃತ್ವದಲ್ಲಿ ಅಳವಡಿಕೆ ಮತ್ತು ಪರೀಕ್ಷೆಗಳನ್ನು ನೆರವೇರಿಸಿದೆ.
ಕೊರೊನಾ ಸಂದರ್ಭದಲ್ಲಿಯೇ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ನಡೆಸಲಾಗಿದೆ. ಐಎಲ್ಎಸ್ ಕಾರ್ಯಾಚರಣೆಗೆ ವಿಮಾನ ನಿಲ್ದಾಣದಲ್ಲಿ ಪ್ರಮೋದ್ ಕುಮಾರ್ ಠಾಕರೆ ಚಾಲನೆ ನೀಡಿದ ವೇಳೆ ವಿಮಾನ ನಿಲ್ದಾಣದ ಸಿಬ್ಬಂದಿ ಇದ್ದರು.
ಈವರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿವಿಒಆರ್ ವ್ಯವಸ್ಥೆ ಬಳಸಿ ವಿಮಾನ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ಇದೀಗ ಖಚಿತವಾಗಿ ಎಟಿಸಿ ಮೂಲಕ ಐಎಲ್ಎಸ್ ರೇಡಿಯೋ ಸಿಗ್ನಲ್ಗಳನ್ನು ಪೈಲಟ್ಗಳಿಗೆ ರವಾನಿಸುತ್ತದೆ. ಇದು ಲೊಕಲೈಸರ್ ಆ್ಯಂಡ್, ಗ್ಲೈಡ್ ಪಾತ್ ಸಿಸ್ಟ್ಂ ಹಾಗೂ ಡಿಸ್ಟೆನ್ಸ್ ಮೆಶರಿಂಗ್ ಇಕ್ಯುಪ್ಮೆಂಟ್ ಎಂಬ ಎರಡು ಪ್ರಮುಖ ವಿಭಾಗ ಹೊಂದಿದೆ.
ಹವಾಮಾನ ವೈಪರಿತ್ಯದ ನಡುವೆ ಐಎಲ್ಎಸ್ ಸಿಗ್ನಲ್ ಟಾವರ್ ರನ್ವೇ ಸನಿಹದ ಆ್ಯಂಟೆನ್ನಾಗಳಿಗೆ ರವಾನಿಸುವ ಸಂದೇಶದಿಂದ ರನ್ವೇ ಉದ್ದಕ್ಕೂ ಇರುವ ಲೈಟ್ಗಳು ಬೆಳಗುತ್ತವೆ. ಇದು ವಿಮಾನ ಲ್ಯಾಂಡಿಂಗ್ಗೆ ಅನುಕೂಲವಾಗುತ್ತದೆ.
ಸಮಸ್ಯೆ ಪರಿಹಾರವಾಗುವ ನಿರೀಕ್ಷೆ
ವಿಮಾನ ಲ್ಯಾಂಡಿಗ್ ವೇಳೆ ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣದ ಕಾರಣ ಹುಬ್ಬಳ್ಳಿ ವಿಮಾನ ನಿಲ್ದಾಣ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗುವ ನಿರೀಕ್ಷೆಯಿದೆ.
ಕಳೆದ ಜೂ.15ರಂದು ಕೂಡ ಹವಾಮಾನ ವೈಪರಿತ್ಯದ ಕಾರಣಕ್ಕೆ ಕೇರಳದ ಕಣ್ಣೂರಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಇಂಡಿಗೋ ನಾಗರಿಕ ವಿಮಾನ ಸಂಕಷ್ಟಕ್ಕೆ ಸಿಲುಕಿತ್ತು. ಲ್ಯಾಂಡಿಂಗ್ ವೇಳೆ ಮುಂಭಾಗದ ಎರಡೂ ಟೈರ್ಗಳು ಬ್ಲಾಸ್ಟ್ ಆಗಿದ್ದವು. ಅದೃಷ್ಟವಶಾತ್ 11 ಜನರು ಸುರಕ್ಷಿತವಾಗಿ ಹೊರಬಂದಿದ್ದರು.
Recommended Video
ಇದಕ್ಕೂ ಮುನ್ನವೂ ಲ್ಯಾಂಡ್ ಆಗಲಾರದೆ ವಿಮಾನಗಳು ಮಂಗಳೂರು, ಬೆಳಗಾವಿ ನಿಲ್ದಾಣಗಳಿಗೆ ತೆರಳಬೇಕಾಗಿತ್ತು. ಐಎಲ್ಎಸ್ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸುಲಭವಾಗಿ ಹಾಗೂ ಸುರಕ್ಷಿತವಾಗಿ ಇಳಿಸಬಹುದು.