ಶಿಕ್ಷಕನ ಮೇಲೆ ಕಾರ್ಯದರ್ಶಿ ಹಲ್ಲೆ ಆರೋಪ: ಹೋರಾಟದ ಎಚ್ಚರಿಕೆ ನೀಡಿದ ನೌಕರರ ಸಂಘಟನೆ
ಹುಬ್ಬಳ್ಳಿ, ಜೂನ್ 22: ಅವರೆಲ್ಲರೂ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಮೂಲಕ ಭವ್ಯ ಭಾರತದ ಪ್ರಜೆಗಳನ್ನು ಹುಟ್ಟು ಹಾಕುವ ಶಿಕ್ಷಕರು. ಈಗ ಪೊಲೀಸ್ ಠಾಣೆ, ಪ್ರತಿಭಟನೆ ಮೂಲಕ ನ್ಯಾಯಕ್ಕಾಗಿ ಬೀದಿಗೆ ಇಳಿಯಲು ಮುಂದಾಗಿದ್ದಾರೆ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಶಿಕ್ಷಕ ಈಗ ಕಾನೂನು ರೀತಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಗರ್ಲ್ಸ್ ಸ್ಕೂಲ್ನ ಇಂಗ್ಲಿಷ್ ಶಿಕ್ಷಕ ಸಂಜೀವ ಶಿರಳ್ಳಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ವಿವಿಧ ಸಂಘಟನೆ ನೇತೃತ್ವದಲ್ಲಿ ಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಆಗ್ರಹಿಸಿದ್ದಾರೆ.

13 ವರ್ಷಗಳಿಂದ ಸಂಜೀವ ಶಿರಳ್ಳಿ ಗರ್ಲ್ಸ್ ಸ್ಕೂಲ್ನ ಇಂಗ್ಲಿಷ್ ಹಾಗೂ ಗಣಿತ ವಿಷಯದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಾಮಾಣಿಕತೆ ಹಾಗೂ ನೇರ ನಿಷ್ಠುರ ವ್ಯಕ್ತಿತ್ವ ಸಹಿಸದ ಕೆಲವರು ಅವರಿಹೆ ಹಲ್ಲೆ ಹಾಗೂ ಕಿರುಕಿಳ ನೀಡುತ್ತಿವೆ ಎಂದು ಆರೋಪಿಸಿದರು.
ಜೂ.11ರಂದು ಸಂಜೆ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಅವರು ಶಿಕ್ಷಕ ಸಂಜೀವ ಶಿರಳ್ಳಿಗೆ ಕರೆಮಾಡಿ, ನಾಳೆಯಿಂದ ಹಳೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮೌಖಿಕ ಆದೇಶ ನೀಡಿದ್ದಾರೆ.
ಅದರಂತೆ ಮರುದಿನ ಶಾಲೆಗೆ ಹೋಗಿ ತಮಗೆ ಬಿಡುಗಡೆ ಪತ್ರ ನೀಡುವಂತೆ ಮುಖ್ಯ ಶಿಕ್ಷಕರಿಗೆ ಕೇಳಿದಾಗ ಅವರು, ಕಾರ್ಯದರ್ಶಿಗಳ ಬಳಿ ಕಳುಹಿಸಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾದ ಶಿಕ್ಷಕ ಸಂಜೀವ ಅವರು, ಲಿಖಿತ ಆದೇಶ ನೀಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಅದರಿಂದ ಕೋಪಗೊಂಡ ಕಾರ್ಯದರ್ಶಿಗಳು ಸಂಜೀವ ಅವರನ್ನು ವಿನಾಃಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಯತ್ನ ನಡೆಸಿದ್ದಾರೆ ಎಂದು ದೂರಿದರು.

ಇಂಥಹ ಘಟನೆಗಳಿಂದ ಅನುದಾನಿತ ಶಾಲೆಯ ಶಿಕ್ಷಕರು ಅಸುರಕ್ಷಿತ ಭಾವ ಅನುಭವಿಸುತ್ತಿದ್ದಾರೆ. ಶಿಕ್ಷಕರು ಬಹಳಷ್ಟು ಸಮಸ್ಯೆ ಹಾಗೂ ತೊಂದರೆಯನ್ನು ಅನುಭವಿಸಿ ಕೆಲಸಮಾಡುವಂತಾಗಿದೆ. ಶಿಕ್ಷಕ ಶಿರಳ್ಳಿಗೆ ಆದ ಸಮಸ್ಯೆ ಕುರಿತು ಹುಬ್ಬಳ್ಳಿ ಉಪನಗರ ಠಾಣೆ ಹಾಗೂ ಶಹರ ಕ್ಷೇತ್ರ ಶಿಕ್ಷಣಾಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕರ ಸಮಸ್ಯೆಗೆ ಧ್ವನಿಯಾಗಿ ಅದನ್ನು ಪರಿಹರಿಸಬೇಕಾದ ಶಿಕ್ಷಣಾಕಾರಿಗಳು ಅಸಹಾಯಕ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಮೇಲಾಧಿಕಾರಿಗಳು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಅವರನ್ನು ಬಂಧನ ಮಾಡಬೇಕು. ಮುಖ್ಯಶಿಕ್ಷಕ ಕೆ.ಟಿ.ದೇಶಪಾಂಡೆ ಸೇರಿದಂತೆ ಆರೋಪಿತ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಒಟ್ಟಿನಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಹಾಗೂ ಶಿಕ್ಷಕರ ನಡುವಿನ ಜಗಳ ಈಗ ಬೀದಿಗೆ ಬಂದಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ ಎನ್ನುವ ಆಗ್ರಹ ಹೆಚ್ಚಾಗಿದೆ.y












Click it and Unblock the Notifications