ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ, ಅಮಾಯಕರ ಮೇಲೆ ಹಲ್ಲೆ, ಕ್ರಮದ ಎಚ್ಚರಿಕೆ ನೀಡಿದ ಪೊಲೀಸ್
ಧಾರವಾಡ, ಸೆಪ್ಟೆಂಬರ್ 21: ದಿನದಿಂದ ದಿನಕ್ಕೆ ಮಕ್ಕಳ ಕಳ್ಳರ ಹಾವಳಿ ವದಂತಿ ಹೆಚ್ಚಾಗುತ್ತಿದ್ದು, ಪೋಷಕರಲ್ಲಿ ಆತಂಕ ಮನೆಮಾಡಿದೆ. ಧಾರವಾಡ ಜಿಲ್ಲೆಯಲ್ಲೂ ಕೂಡ ಈ ಮಕ್ಕಳ ಕಳ್ಳರ ಹಾವಳಿ ಜೋರಾಗಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ವಿಚಾರದ ಕುರಿತು ಮಾತನಾಡಿರುವ ಎಸ್ ಪಿ ಲೋಕೇಶ್, ಅಂತಹ ಘಟನೆ ಜಿಲ್ಲೆಯಲ್ಲಿ ನಡೆದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಬೇರೆ ದೇಶದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಬಿತ್ತರಿಸಿ, ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಈ ಹಿನ್ನೆಲೆ ಅಪರಿಚಿತರು ಕಂಡು ಬಂದರೆ 112 ಕ್ಕೆ ಕರೆ ಮಾಡಿ, ಸ್ಥಳಕ್ಕೆ ಪೊಲೀಸರು ಬಂದು ವಿಚಾರಣೆ ಮಾಡುವವರೆಗೂ ಯಾರು ಕೂಡ ಅಮಾಯಕರ ಮೇಲೆ ಹಲ್ಲೆ ಮಾಡುವಂತಿಲ್ಲ. ಅಮಾಯಕರನ್ನು ಹಿಡಿದು ಹೊಡೆಯುವುದು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದು,"ಮಕ್ಕಳ ಕಳ್ಳರ ವದಂತಿಗೆ ಯಾರೂ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಮಕ್ಕಳ ಕಳ್ಳರ ಬಗ್ಗೆ ಅನುಮಾನ ವ್ಯಕ್ತವಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಅನುಮಾನ ಬಂದಿದೆ ಎಂದು ಅಮಾಯಕ ಜನರ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಸೂಚನೆ ನೀಡಿದ್ದಾರೆ.
ಗದಗ: ಮಕ್ಕಳ ಕಳ್ಳರ ವದಂತಿಗೆ ನಂಬಬೇಡಿ, ವಿಡಿಯೋಗಳನ್ನು ಶೇರ್ ಮಾಡಬೇಡಿ- ಎಸ್ಪಿ ಸೂಚನೆ
ಪೊಲೀಸರ ನಿದ್ದೆಗೆಡಿಸುತ್ತಿರುವ ವದಂತಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಿ ಮಕ್ಕಳನ್ನು ತೆಗೆದುಕೊಂಡು ಹೋಗಿದ್ದಾರೆ, ಇಲ್ಲಿ ಮಕ್ಕಳನ್ನು ಕಳ್ಳತನ ಮಾಡಿ ಅಂಗಾಂಗಗಳ ಕಳ್ಳತನ ಮಾಡುವ ದಂದೆ ನಡೆಯುತ್ತಿದೆ ಎಂಬ ಅಂತೆ, ಕಂತೆ ಎಂಬ ವದಂತಿ ಹಬ್ಬಿದೆ. ಹಾಗಾಗಿ ಸಾರ್ವಜನಿಕರಲ್ಲಿ ಜಾಗೃತಿ, ಮನವೊಲಿಸುವುದು ಖಾಕಿ ಪಡೆದ ದೊಡ್ಡ ಸವಾಲಾಗಿದೆ.
ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗಿದೆ ಎಂಬ ವಿಡಿಯೊ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ಹಳ್ಳಿ, ಪಟ್ಟಣಗಳಲ್ಲಿ ಸಾರ್ವಜನಿಕರು ಭಯಭೀತರಾಗಿದ್ದಲ್ಲದೇ, ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಮಕ್ಕಳ ಕಳ್ಳರ ಹಾವಳಿ ವದಂತಿ ಹೆಚ್ಚಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ದರೋಡೆಕೋರರ ಹಾವಳಿ ಎಂಬುವುದರ ಬಗ್ಗೆ ಚರ್ಚೆಯೂ ಜೋರಾಗಿದೆ.
ಪಿಎಸ್ಐ ನೇಮಕಾತಿ ಹಗರಣ: ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ ಸದನದಲ್ಲಿ ಪಟ್ಟು
ಸಾಧು ಸಂತರ ವೇಷದಲ್ಲಿ ಕಳ್ಳರಿದ್ದಾರೆಂಬ ವದಂತಿ
ವಿವಿಧ ಕಡೆಗಳಿಂದ ಆಗಮಿಸಿ ಹಳ್ಳಿಗಳಲ್ಲಿ ಭಿಕ್ಷೆ, ದವಸ ಧಾನ್ಯ, ಹಣ, ಆಹಾರ ಬೇಡಿ ಬದುಕು ಸಾಗಿಸುತ್ತಿರುವವರಿಗೂ ಈ ಮಕ್ಕಳ ಕಳ್ಳರ ವದಂತಿಯಿಂದ ತೀವ್ರ ಸಮಸ್ಯೆಯಾಗಿದೆ. ಕೆಲವು ವಿಡಿಯೊ ಹಾಗೂ ಫೋಟೋಗಳಲ್ಲಿ ಸಾಧು-ಸಂತರ, ನಾಗಾ ಸಾಧುಗಳ ಹಾಗೂ ಭಿಕ್ಷುಕರ ವೇಷದಲ್ಲಿ ಗ್ರಾಮಕ್ಕೆ ಬಂದು ಭಿಕ್ಷೆ ಬೇಡುವ ನೆಪದಲ್ಲಿ ಗ್ರಾಮದಲ್ಲಿನ ಪ್ರತಿ ಮನೆ-ಮನೆಗೆ ಭೇಟಿ ನೀಡಿ, ಮಕ್ಕಳ ಹಾಗೂ ಮನೆಯ ಪರಿಸ್ಥಿತಿ ಬಗ್ಗೆ ತಿಳಿದುಕೊಂಡು, ಯಾರೂ ಇಲ್ಲದ ಸಮಯದಲ್ಲಿ ಮಕ್ಕಳ ಕರೆದುಕೊಂಡು ಹೋಗುತ್ತಾರೆ. ಮನೆಗಳಲ್ಲಿ ಕಳ್ಳತನ ಹಾಗೂ ದರೋಡೆ ಮಾಡುತ್ತಿದ್ದಾರೆ ಎಂಬ ವಂದತಿ ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಚರ್ಚೆಯಲ್ಲಿದೆ. ಇದರಿಂದಾಗಿ, ಮಹಿಳೆ, ಮಕ್ಕಳು ಮನೆಯಿಂದ ಹೊರಗೆ ಹೋಗಲು ಆತಂಕ ಪಡುವಂತಾಗಿದೆ. ಇದು ಪೊಲೀಸರ ಚಿಂತೆಗೆ ಕಾರಣವಾಗಿದೆ.
ಹಲ್ಲೆ ಮಾಡದೆ 112ಕ್ಕೆ ಕರೆ ಮಾಡಲು ಸೂಚನೆ
ಧಾರವಾಡ ಜಿಲ್ಲೆಯ ನಾಲ್ಕು ಕಡೆ ಈಗಾಗಲೇ ಮಕ್ಕಳ ಕಳ್ಳರು ಎಂದು ಭಾವಿಸಿ ಹಲವು ಅಮಾಯಕರನ್ನು ಸಾರ್ವಜನಿಕರು ಥಳಿಸಿದ್ದಾರೆ. ಮನಸೂರು, ಹಳ್ಳಿಕೇರಿ ಗ್ರಾಮದಲ್ಲಿ ಮಕ್ಕಳ ಕಳ್ಳರೆಂಬ ಶಂಕೆಗೆ ಒಳಗಾಗಿ ಅಮಾಯಕರು ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗಿದ್ದಾರೆ. ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿಂದಿ ಮಾತನಾಡುತ್ತ ಗ್ರಾಮದಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಗ್ರಾಮಸ್ಥರು ಗ್ರಾಮದ ಮಧ್ಯದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಆದರೆ, ಧಾರವಾಡ ಜಿಲ್ಲೆಯಲ್ಲಿ ಯಾವುದೇ ರೀತಿಯ ಮಕ್ಕಳ ಕಳ್ಳತನ ಪ್ರಕರಣ ದಾಖಲಾಗಿಲ್ಲ. ಸಾರ್ವಜನಿಕ ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಹಾಗೇನಾದರೂ ಗ್ರಾಮದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಕ್ಕಳ ಕಳ್ಳರ ವದಂತಿ ಕುರಿತು ಬುಧವಾರ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ.
ಹಾಸ್ಟೆಲ್ಗಳಿಂದ ಮಕ್ಕಳನ್ನು ಕರೆಸಿಕೊಳ್ಳುತ್ತಿರುವ ಪಾಲಕರು
ಗ್ರಾಮೀಣ ಪ್ರದೇಶ ಹಾಗೂ ಪಟ್ಟಣಗಳಲ್ಲಿ ಹರಡಿರುವ ಮಕ್ಕಳ ಕಳ್ಳರ ವದಂತಿಯಿಂದ ಸಾರ್ವಜನಿಕರು ತಮ್ಮ ಮಕ್ಕಳನ್ನು ಶಾಲೆ ಹಾಗೂ ವಸತಿನಿಲಯಗಳಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಪಾಲಕರು ವಸತಿನಿಲಯಗಳಿಗೆ ಬಂದು ಮಕ್ಕಳನ್ನು ಮನೆಗೆ ಕಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೆಲವು ಕಡೆ ವಿದ್ಯಾರ್ಥಿಗಳನ್ನು ಪಾಲಕರು ಒತ್ತಾಯಪೂರ್ವಕವಾಗಿ ಮನೆಗೆ ಕರೆಸಿಕೊಳ್ಳುತ್ತಿದ್ದು, ಶಾಲೆಗಳಿಗೂ ಕಳುಹಿಸಲೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಹೀಗಾಗಿ ವಸತಿನಿಲಯ, ಶಾಲೆಗಳು ಮತ್ತು ವಸತಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿದೆ.