ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
ಹುಬ್ಬಳ್ಳಿ, ಮಾರ್ಚ್ 18: ತೋಳ ದಾಳಿಯಲ್ಲಿ ಮುಖಕ್ಕೆ ಹಾನಿಯಾದ ಅಪರೂಪದ ಪ್ರಕರಣವೊಂದರಲ್ಲಿ, ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಆಸ್ಪತ್ರೆಯ ವೈದ್ಯರು ಒಂಬತ್ತು ತಿಂಗಳ ಗಂಡು ಮಗುವಿಗೆ ಫೇಶಿಯೋಮ್ಯಾಕ್ಸಿಲರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು.
ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಹುಸೇನಪ್ಪ ಮತ್ತು ದುರ್ಗಮ್ಮ ಅವರ ಪುತ್ರನ ಮೇಲೆ ಮಾರ್ಚ್ 7ರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ಅವರ ಮನೆಯಲ್ಲಿ ತೋಳ ದಾಳಿ ನಡೆಸಿತ್ತು.
ತೋಳದ ದಾಳಿಯಲ್ಲಿ ಮಗುವಿನ ಕೆಳಗಿನ ದವಡೆ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು ಮತ್ತು ಚರ್ಮವು ಹರಿದಿತ್ತು. ಹೊಸರಿತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸಾ ನಂತರ ಮಗುವನ್ನು ಮಾರ್ಚ್ 8ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ಡಾ.ಮಂಜುನಾಥ್ ವಿಜಾಪುರ್ ನೇತೃತ್ವದ ಬಾಯಿ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ ಮತ್ತು ಪೀಡಿಯಾಟ್ರಿಕ್ಸ್ ವಿಭಾಗದ ತಂಡವು ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಮಗುವಿನ ಕೆಳಗಿನ ದವಡೆಯನ್ನು ಪುನರ್ನಿರ್ಮಿಸಿ, ಚರ್ಮವನ್ನು ಹಿಂದಕ್ಕೆ ಹೊಕೆಯಲಾಗಿದೆ. ಈಗ ಮಗು ಸಾಮಾನ್ಯವಾಗಿ ತಿನ್ನಬಹುದು ಮತ್ತು ಕುಡಿಯಬಹುದಂತಾಗಿದೆ.
"ಕಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಹಿರಿಯ ವ್ಯಕ್ತಿಗಳ ಮೇಲೆ ಇಂತಹ ಫಿಸಿಯೋಮ್ಯಾಕ್ಸಿಲರಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಆದರೆ ಒಂಬತ್ತು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ಈ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನಡೆಸಲಾಗಿದೆ. ಈಗ ಮಗುವಿನ ಆರೋಗ್ಯ ಉತ್ತಮವಾಗಿದ್ದು, ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು" ಎಂದು ಕಿಮ್ಸ್ ವೈದ್ಯರು ತಿಳಿಸಿದರು.
""ಮಗುವಿನ ಕೆಳ ದವಡೆ ಸಂಪೂರ್ಣವಾಗಿ ಹರಿದಿತ್ತು, ಪ್ಲೇಟ್ಗಳ ಸಹಾಯದಿಂದ ನಾವು ದವಡೆಯನ್ನು ಪುನರ್ನಿರ್ಮಿಸಿದ್ದೇವೆ ಮತ್ತು ಚರ್ಮವನ್ನು ಯಶಸ್ವಿಯಾಗಿ ಹೊಲಿದಿದ್ದೇವೆ. ಎರಡು ವರ್ಷಗಳ ನಂತರ ದ್ವಿತೀಯ ತಿದ್ದುಪಡಿ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ. ಅದು ಮಗುವಿಗೆ ಇತರರಂತೆ ಸ್ವಾಭಾವಿಕವಾಗಿ ದವಡೆ ಬೆಳೆಯಲು ಸಹಾಯ ಮಾಡುತ್ತದೆ" ಎಂದು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಜಾಪುರ ಹೇಳಿದರು.












Click it and Unblock the Notifications