ಹುಬ್ಬಳ್ಳಿ; ಪೊಲೀಸರ ಮೇಲೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿ
ಹುಬ್ಬಳ್ಳಿ, ಏಪ್ರಿಲ್ 17; ಸಾಮಾಜಿಕ ಜಾಲತಾಣದಲ್ಲಿ ಯುವಕ ಹಾಕಿದ ಪ್ರಚೋದನಾಕಾರಿ ಪೋಸ್ಟರ್ನಿಂದಾಗಿ ಹುಬ್ಬಳ್ಳಿಯಲ್ಲಿ ವಿವಾದ ಉಂಟಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವನ್ನು ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಚಿತ್ರ ವೈರಲ್ ಆಗುತ್ತಿದ್ದಂತೆ ಒಂದು ಕೋಮಿನವರು ಕಲ್ಲು ತೂರಾಟ ನಡೆಸಿದರು.
ಹುಬ್ಬಳ್ಳಿ; ವೈಮಾನಿಕ ತರಬೇತಿ ಕೇಂದ್ರಕ್ಕೆ ಸೇರಲು ಅರ್ಹತೆಗಳು
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸಮೀಪದಲ್ಲೇ ಕಲ್ಲು ತೂರಾಟ ನಡೆದಿದ್ದು, ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡರು. ಸಮೀಪದ ಆಸ್ಪತ್ರೆ ಮೇಲೆಯೂ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಹುಬ್ಬಳ್ಳಿ; ಮೇ 1ರಿಂದ ಮಂಗಳೂರು, ಮೈಸೂರಿಗೆ ವಿಮಾನ
ಯುವಕರು ಪೊಲೀಸರ ವಾಹನದ ಮೇಲೆಯೂ ಕಲ್ಲು ತೂರಿದರು. ಅಂತಿಮವಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಲು ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಭದ್ರಾವತಿಯಿಂದ ಕ್ಷಿಪ್ರ ಕಾರ್ಯಾಚರಣೆ ಪಡೆ ಕರೆಸಿಕೊಳ್ಳಲಾಗಿದೆ. ರಜೆಯ ಮೇಲೆ ಹೋಗಿದ್ದ ಪೊಲೀಸರಿಗೆ ತಕ್ಷಣ ವಾಪಸ್ ಆಗುವಂತೆ ಸೂಚನೆ ನೀಡಲಾಗಿದೆ.
ಹುಬ್ಬಳ್ಳಿ; ಟೋಲ್ ವಿನಾಯಿತಿಗೆ ಕೇಂದ್ರ ಸಚಿವರಿಗೆ ಪತ್ರ
ಪೊಲೀಸರು ಮತ್ತು ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಇನ್ನಷ್ಟು ಜನರ ಬಂಧನವಾಗುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ
ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ ಯುವಕ ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ. ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಒಂದು ಸಮುದಾಯದ ಯುವಕರು ಕಲ್ಲು ತೂರಾಟ ನಡೆಸಿದರು. ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಾಲ್ವರು ಪೊಲೀಸರಿಗೆ ಗಾಯ
ಪೊಲೀಸರ ಮೇಲೆ, ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಾನ್ಸ್ಟೇಬಲ್ ಗುರುಪಾಪ್ಪ ಸ್ವಾದಿ, ಪೂರ್ವ ಸಂಚಾರ ಇನ್ಸ್ಪೆಕ್ಟರ್ ಕಾಡದೇವರಮಠ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಸಹ ಮಾಡಿದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ದೂರು ದಾಖಲು ಮಾಡಲಾಗಿದೆ
ವಿವಾದಿತ ಎಡಿಟ್ ಮಾಡಿದ ಪೋಸ್ಟರ್ ಕುರಿತು ಹುಬ್ಬಳ್ಳಿ ಅಂಜುಮನ್ ಸಮಿತಿಗೆ ಮಾಹಿತಿ ಬಂದ ಬಳಿಕ ದೂರು ನೀಡಲಾಗಿದೆ. "ಆರೋಪಿಯನ್ನು ಸಹ ಬಂಧಿಸಲಾಗಿದೆ. ಹಲವಾರು ಜನರು ಒಟ್ಟಿಗೆ ಸೇರಿದಾಗ ಗಲಾಟೆಯಾಗಿದೆ. ಯಾರೂ ಕಾನೂನು ಉಲ್ಲಂಘನೆ ಮಾಡುವುದು ಬೇಡ. ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸಿ ನ್ಯಾಯ ಕೇಳೋಣ. ಎಲ್ಲರೂ ಶಾಂತಿ ಕಾಪಾಡೋಣ" ಎಂದು ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಕರೆ ನೀಡಿದ್ದಾರೆ.
ಶಾಂತಿ ಕಾಪಾಡಲು ಮನವಿ
ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತ ಲಾಭೂರಾಮ್ ಮಾತನಾಡಿ, "ಅವಹೇಳನಕಾರಿ ಪೋಸ್ಟರ್ ಹಾಕಿದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಜನರು ಸೇರಿದಾಗ ನಾವು ಮಾತುಕತೆ ನಡೆಸಲು ಮುಂದಾದೆವು. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಕಲ್ಲು ತೂರಾಟ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲರೂ ಶಾಂತಿ ಕಾಪಾಡಲು ಸಹಕಾರ ನೀಡಬೇಕು" ಎಂದು ಮನವಿ ಮಾಡಿದ್ದಾರೆ.