ಮೋದಿ ಜನರ ಮುಂದೆ ಸತ್ಯ ಹೇಳಲಿ ಅಂದ್ರು ರೋಹನ ಗುಪ್ತಾ!
ಹುಬ್ಬಳ್ಳಿ, ಮೇ1 : ಬಿಜೆಪಿಯ ಯಡಿಯೂರಪ್ಪ ವಿರುದ್ಧ 24 ಭ್ರಷ್ಟಾಚಾರ, ವಂಚನೆ ಪ್ರಕರಣಗಳಿವೆ. ಮಾಜಿ ಸಚಿವ ಶ್ರೀರಾಮಲು , ಸೋಮಶೇಖರ ರೆಡ್ಡಿ, ಟಿ.ಎಚ್. ಸುರೇಶ್ ಬಾಬು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಿ.ಟಿ. ರವಿ ಹೀಗೆ ಅನೇಕ ನಾಯಕರ ವಿರುದ್ಧ ಗಂಭೀರ ಪ್ರಕರಣಗಳಿವೆ. ಹೀಗಿರುವಾಗ ಬಿಜೆಪಿ ನಾಯಕರು ಯಾವ ನೈತಿಕ ಆಧಾರದ ಮೇಲೆ ಜನರ ಬಳಿ ಮತ ಕೇಳುತ್ತಾರೆ ಗೊತ್ತಿಲ್ಲ ಎಂದು ಎಐಸಿಸಿ ಮಾಧ್ಯಮ ಸಂಯೋಜಕ ರೋಹನ ಗುಪ್ತಾ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಸಿದ್ಧರಿಲ್ಲ. ರೆಡ್ಡಿ ಸಹೋದರರೊಂದಿಗೂ ಸಂಬಂಧವನ್ನು ಸಹ ಅವರು ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೆ ಸ್ವತಃ ಮುಖ್ಯಮಂತ್ರಿ ಅಭ್ಯರ್ಥಿಯೊಂದಿಗೆ ಯಾಕೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಇನ್ನು ಬಿಜೆಪಿಯ ಅನೇಕ ನಾಯಕರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಅನೇಕ ಪ್ರಕರಣಗಳಿವೆ. ರೆಡ್ಡಿ ಸಹೋದರರ ವಿರುದ್ಧ 35 ಸಾವಿರ ಕೋಟಿ ಅಕ್ರಮ ಗಣಿಗಾರಿಕೆ ಹಗರಣದ ಆರೋಪವಿದೆ. ರೆಡ್ಡಿ ಸಹೋದರರ ರಕ್ಷಣೆಗೆ ಸಿಬಿಐ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ಮುಕ್ತ ದೇಶದ ಜಪ ಮಾಡುವ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಭ್ರಷ್ಟರನ್ನು ಪಾಲಿಸುತ್ತಿದ್ದಾರೆ. ಇಂದು ರಾಜ್ಯ ಪ್ರವಾಸದಲ್ಲಿ ಇರುವ ಪ್ರಧಾನಿ ಅವರು ಈ ರಾಜ್ಯದ ಜನರ ಮುಂದೆ ಸತ್ಯ ಹೇಳಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications