ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ; ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಆಗಸ್ಟ್, 12: "ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ನೀಡುವ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಲಿದೆ" ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಈದ್ಗಾ ಮೈದಾನ ಅಥವಾ ರಾಣಿ ಚೆನ್ನಮ್ಮ ಮೈದಾನ ನಮ್ಮ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ. ಹೀಗಿರುವಾಗ ಈದ್ಗಾ ಮೈದಾನದಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು, ಯಾವುದಕ್ಕೆ ಅನುಮತಿ ನೀಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ಇದೆ. ಗಣೇಶೋತ್ಸವದ ವಿಚಾರವಾಗಿಯೂ ಪಾಲಿಕೆ ತೀರ್ಮಾನ ಮಾಡಲಿದೆ" ಎಂದರು.
ಚಾಮರಾಜಪೇಟೆ ನಂತರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಒತ್ತಾಯ
"ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆಗೆ 2 ದಿನ ಎರಡು-ಮೂರು ಗಂಟೆ ಅವಕಾಶ ಕೊಡಬೇಕು. ಇದನ್ನು ಬಿಟ್ಟರೆ ಉಳಿದ ವರ್ಷ ಪೂರ್ತಿ ಮೈದಾನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುತ್ತದೆ. ಹೀಗಾಗಿ ಇದರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ" ಎಂದು ಸ್ಪಷ್ಟನೆ ನೀಡಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ದಶಕಗಳ ಕಾಲ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ಇದರ ಹೋರಾಟ ರೋಚಕ ಇತಿಹಾಸವನ್ನು ಹೊಂದಿದೆ. ಆದರೆ ದಶಕದ ಹಿಂದೆಯೇ ಹುಬ್ಬಳ್ಳಿಯ ಈದ್ಗಾ ವಿವಾದಕ್ಕೆ ಅಂತ್ಯ ಹಾಡಲಾಗಿತ್ತು. ಇತ್ತೀಚೆಗೆ ನಡೆದ ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದದ ಬಳಿಕ, ಮತ್ತೆ ಹುಬ್ಬಳ್ಳಿಯ ಈದ್ಗಾ ಮೈದಾನ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕೋರಿ ಗಜಾನನ ಮಂಡಳಿಯೊಂದು ಮನವಿಯನ್ನು ಮಾಡಿತ್ತು. ಈ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ಪಾಲಿಕೆ ತಿರ್ಮಾನಕ್ಕೆ ಬಿಟ್ಟಿದ್ದು ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟನೆ ಕೊಟ್ಟರು.