ಪೊಲೀಸರ ಲಾಠಿ ಏಟು ತಿಂದು ಜೈಲು ಸೇರಿದ್ದೆವು ಎಂದ ಪ್ರಲ್ಹಾದ್ ಜೋಶಿ: ಯಾವಾಗ ಗೊತ್ತಾ?
ಹುಬ್ಬಳ್ಳಿ ಆಗಸ್ಟ 13: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅದರ ಪ್ರಯುಕ್ತ ಈದ್ಗಾ ಮೈದಾನದಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ಈ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಮಾಡಿದ ಹೋರಾಟ ಮರೆಯಲಾದೀತೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅಮೃತ ಮಹೋತ್ಸವ ಅಂಗವಾಗಿ ಹುಬ್ಬಳ್ಳಿಯ ಈದ್ಗಾ ಮೈದನಾದಲ್ಲಿ ಧ್ವಜ ಹಾರಾಡಿದ್ದು ವಿಶೇಷ ವಾಗಿತ್ತು. ಇಲ್ಲಿ ಧ್ವಜಾರೋಹಣ ಹಾಗೂ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾಡಿ ಮಾತನಾಡಿದ ಅವರು, ರಾಷ್ಟ್ರಧ್ವಜ ಹಾರಿಸುವ ವಿಚಾರ ಬಂದಾಗ ಹುಬ್ಬಳ್ಳಿ ಈದ್ಗಾ ಮೈದಾನ ಹಿಂದಿರುವ ರಣ ರೋಚಕ ಇತಿಹಾಸ ಮರೆಯಲು ಸಾಧ್ಯವೆ ಇಲ್ಲ. ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟ್ರಧ್ವಜ ಹಾರಿಸಲು ಮೂವತ್ತು ವರ್ಷದ ಹಿಂದೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ದೊಡ್ಡ ಹೋರಾಟವನ್ನೇ ಮಾಡಬೇಕಾಯ್ತು ಎಂದು ಅಂದಿನ ದಿನಗಳನ್ನು ಜೋಶಿ ಸ್ಮರಿಸಿದರು.
ಹರ್ ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜ ಹಿಡಿದು ನಾನು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಹೆಜ್ಜೆಯಿಟ್ಟಾಗ ಹಳೆಯ ನೆನಪುಗಳು ಕಾಡಿದವು. ಅಂದು ಇದೇ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ನಡೆಸಿದ ಆಂದೋಲನ, ಪೊಲೀಸರ ಲಾಠಿ ಏಟು ತಿಂದು ಜೈಲು ಸೇರಿದ್ದೇವು ಎಂದರು.

ಈದ್ಗಾ ಮೈದಾನ: ಧ್ವಜಾರೋಹಣಕ್ಕೆ ಕಾಂಗ್ರೆಸ್ ನಕಾರ
ಅಮೃತ ಮಹೋತ್ಸವದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವುದೇ ಒಂದು ವಿಶೇಷ, ಅವಿಸ್ಮರಣೀಯ ಸುಸಂದರ್ಭವಾಗಿದೆ. ರಾಷ್ಟ್ರದ್ವಜವನ್ನು ಹಾರಿಸಲು ಮೂವತ್ತು ವರ್ಷದ ಹಿಂದೆ ಅವಕಾಶ ನೀಡದ ಕಾಂಗ್ರೆಸ್ ಪಕ್ಷವು ರಾಷ್ಟ್ರವಿರೋಧಿ ನೀತಿಯನ್ನು ಅನುಸರಿಸಿತ್ತು. ಅಂದಿನ ಹೋರಾಟದಲ್ಲಿ ಆರು ಜನ ಅಮಾಯಕರು, ರಾಷ್ಟ್ರ ಹಾಗೂ ರಾಷ್ಟ್ರಧ್ವಜ ಭಕ್ತರು ಪ್ರಾಣತೆತ್ತರು. ಇಂದು ಅದೇ ಈದ್ಗಾ ಮೈದಾನದಲ್ಲಿ ಸಹಸ್ರಾರು ರಾಷ್ಟ್ರಭಕ್ತರು, ಶಾಲಾ ಮಕ್ಕಳೊಂದಿಗೆ ಬೃಹತ್ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದು ಅವರು ಹೇಳಿದರು.

ಮಠದಲ್ಲಿ ಧ್ವಜ ಹಾರಿಸಲು ಕೋರಿಕೆ
ಇದೇ ವೇಳೆ ಹುಬ್ಬಳ್ಳಿ ನಗರದ ತೊರವಿಗಲ್ಲಿ ರಾಘವೇಂದ್ರ ಸ್ವಾಮಿ ಮಠಕ್ಕೆ ಸಚಿವ ಪ್ರಹ್ಲಾದ್ ಜೋಶಿ ಅವರು ಕುಟುಂಬ ಸಮೇತವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಠದ ಅರ್ಚಕರಿಗೆ ತ್ರಿವರ್ಣ ಧ್ವಜವನ್ನು ನೀಡಿ 'ಹರ್ ಘರ್ ತಿರಂಗಾ' ಅಭಿಯಾನ ಭಾಗವಾಗಿ ಮಠದಲ್ಲಿ ತಿರಂಗಾ ಹಾರಿಸುವಂತೆ ಮನವಿ ಮಾಡಿದರು.












Click it and Unblock the Notifications