ಹುಬ್ಬಳ್ಳಿ: ಗುತ್ತಿಗೆ ಪದ್ಧತಿ ವಿರೋಧಿಸಿ ಪೌರಕಾರ್ಮಿಕರ ಪ್ರತಿಭಟನೆ
ಹುಬ್ಬಳ್ಳಿ, ಜೂನ್ 12 : ಇಂದು (ಸೋಮವಾರ) ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಬೃಹತ್ ಪ್ರತಿಭಟನೆ ನಡೆಯಿತು.
ಗುತ್ತಿಗೆ ಪದ್ದತಿ ರದ್ದುಗೋಳಿಸಿ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಸಾವಿರಾರು ಗುತ್ತಿಗೆ ಪೌರ ಕಾರ್ಮಿಕರೊಂದಿಗೆ ಸೋಮವಾರ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.

ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಆರಂಭವಾದ ಹೋರಾಟಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದವಲ್ಲದೆ, ಪ್ರತಿಭಟನಾ ನಿರತ ಗುತ್ತಿಗೆ ಪೌರ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮೆಯರ್ ಡಿ.ಕೆ.ಚೌವ್ಹಾಣ್, ಪೌರ ಕಾರ್ಮಿಕರ ಮನವೊಲಿಕೆಗೆ ಮುಂದಾದರೂ ಯಾವುದೇ ಪ್ರಯೋಜವಾಗಲಿಲ್ಲ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಜಯ್ ಗುಂಟ್ರಾಳ್, "ಕಾಂಗ್ರೆಸ್ ತನ್ನ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಘೋಷಣೆ ಮಾಡಿತ್ತು.
ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬೃಹತ್ ಸಮಾವೇಶದಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಲಾಗುತ್ತದೆ ಎಂದು ಹೇಳಿದ್ದರಾದರೂ ಭರವಸೆ ಮಾತ್ರ ಈ ವರೆಗೂ ಈಡೇರಿಲ್ಲ.
ಅಲ್ಲದೆ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸದೇ ಅವರನ್ನು ಶೋಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು".
ಸುಪ್ರಿಂಕೋರ್ಟ್ ಸೇರಿದಂತೆ ವಿವಿಧ ಅಧೀನ ನ್ಯಾಯಾಲಯಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರವರನ್ನು ಖಾಯಂಗೊಳಿಸಬೇಕು ಎಂದು ತೀರ್ಪು ನೀಡಿದೆ. ಆದರೆ, ಸರ್ಕಾರವು ನ್ಯಾಯಾಲಯದ ಸೂಚನೆಯನ್ನು ಧಿಕ್ಕರಿಸಿದೆ.
2008ರಿಂದ 2017ರ ವರೆಗೆ 85 ಗುತ್ತಿಗೆ ಪೌರ ಕಾರ್ಮಿಕರು ಮ್ಯಾನ್ ಹೋಲ್ಗಳಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮಲಬಾಚುವ ನಿರ್ಮೂಲನೆ ಕಾಯ್ದೆ-2013ರಲ್ಲಿ ಸರಕಾರ ಜಾರಿಗೆ ತಂದರೂ ಈ ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿದೆ.
ಈ ಕಾರಣದಿಂದಲೇ ಸರ್ಕಾರದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications