ಪ್ರಧಾನಿ ಮೋದಿಯಿಂದ ಧಾರವಾಡದಲ್ಲಿ ಐಐಟಿ ಕ್ಯಾಂಪಸ್ ಉದ್ಘಾಟನೆ:ಪ್ರಹ್ಲಾದ್ ಜೋಶಿ
ಧಾರವಾಡ, ಸೆಪ್ಟೆಂಬರ್ 11: ಧಾರವಾಡದಲ್ಲಿ 60 ಎಕರೆ ಭೂಮಿಯಲ್ಲಿ ಒಟ್ಟು 114 ಕೋಟಿ ರೂ. ವೆಚ್ಚದಲ್ಲಿ 41,800 ಚದರ ಮೀಟರ್ ಜಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸಂಸ್ಥೆ ನಿರ್ಮಾಣವಾಗಿದೆ. ಆದಷ್ಟು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯಲ್ಲಿ ಭಾನುವಾರ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಧಾರವಾಡ ಐಐಟಿ ಕ್ಯಾಂಪಸ್ನಲ್ಲಿ ಸುಮಾರು 1.2 ಕೋಟಿ ಲೀಟರ್ ಮಳೆನೀರು ಕೊಯ್ಲು ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿಯಲ್ಲಿ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದರು.
ಶಾಸಕರ ಮೌಲ್ಯ ಮಾಪನ; ಜಗದೀಶ್ ಶೆಟ್ಟರ್ ಕಾರ್ಯ ವೈಖರಿಗೆ ಅಂಕ ನೀಡಿ
ಈ ಐಐಟಿಯಲ್ಲಿ ಇನ್ಕ್ಯೂಬೇಶನ್ ಕೇಂದ್ರವನ್ನು ಪ್ರಾರಂಭಿಸುವಂತೆ ನರೇಂದ್ರ ಮೋದಿಯವರು ಸಲಹೆ ನೀಡಿದ್ದರು. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಕೂಡ ಧಾರವಾಡ ಐಐಟಿಗೆ ಮೂಲಭೂತ ಸೌಕರ್ಯ ಒದಗಿಸಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿಗಾಗಿ 11.21 ಕೋಟಿ ರೂ. ಅನುದಾನ ಒದಗಿಸಲು ಅನುಮೋದನೆ ನೀಡಿದ್ದು, ಎಲ್ಲ ಅಗತ್ಯತೆಗಳನ್ನು ಪೂರೈಸಿದೆ ಎಂದು ಅವರು ವಿವರಿಸಿದರು.
ದೇಶದಲ್ಲಿ ಏಳು ಕಡೆಗಳಲ್ಲಿ ಐಐಟಿ ಸ್ಥಾಪನೆ
ಇಂದಿನ ಘಟಿಕೋತ್ಸವದಲ್ಲಿ ನಾಲ್ಕು ಎಂಎಸ್, ಒಂದು ಪಿಎಚ್ ಡಿ ಹಾಗೂ 120 ಬಿ.ಟೆಕ್ ಸೇರಿದಂತೆ ಪದವಿ ಪ್ರಮಾಣಪತ್ರ ಸ್ವೀಕರಿಸಿದ ಒಟ್ಟು 125 ವಿದ್ಯಾರ್ಥಿಗಳಿಗೆ ಕೇಂದ್ರ ಸಚಿವರು ಶುಭ ಹಾರೈಸಿದರು. ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. 2014ರಿಂದ 2021 ರವರೆಗೆ ದೇಶದಲ್ಲಿ ನಮ್ಮ ಹೆಮ್ಮೆಯ ಜಿಲ್ಲೆ ಧಾರವಾಡ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಹೊಸದಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳು ಸ್ಥಾಪನೆಗೊಂಡಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಕರೆಗೆ ಇಡಿ ದೇಶವೇ ಸ್ಪಂದಿಸುತ್ತಿದೆ. ಈ ಸಂಸ್ಥೆಗಳು ಹೊಸ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿವೆ.
ಧಾರವಾಡದಲ್ಲಿ ಎನ್ಡಿಎ ಮಾದರಿಯ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆ; ಬಸವರಾಜ ಬೊಮ್ಮಾಯಿ
ಸ್ಟಾರ್ಟ್ಅಪ್ಗಳಿಂದ ದೇಶದ ಆರ್ಥಿಕತೆಗೆ ಹೆಚ್ಚು ಕೊಡುಗೆ
2016-17ರಲ್ಲಿ ದೇಶದಲ್ಲಿ ಕೇವಲ 471 ಸ್ಟಾರ್ಟ್ಅಪ್ಗಳು ಇದ್ದವು. 2022ರ ಜೂನ್ ವೇಳೆಗೆ ಇವುಗಳ ಸಂಖ್ಯೆ 72,993ಕ್ಕಿಂತ ಹೆಚ್ಚಾಗಿದೆ. ಸುಮಾರು 333 ಬಿಲಿಯನ್ ಡಾಲರ್ಗೂ ಹೆಚ್ಚು ವಹಿವಾಟು ನಡೆಸುತ್ತಿವೆ. ಇದರಿಂದ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎನ್ಇಪಿ ಜಾರಿ ನಂತರ ಶಿಕ್ಷಣ ಇಲಾಖೆಯಲ್ಲಿ ಪ್ರಗತಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸಿದ ನಂತರ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ. ಇಂದು ಶಿಕ್ಷಣ ಸಂಸ್ಥೆಗಳಿಂದ ಕೇವಲ ಪದವೀಧರರಷ್ಟೇ ಅಲ್ಲದೇ, ಪರಿಪೂರ್ಣ ವ್ಯಕ್ತಿತ್ವದ, ಕೌಶಲ್ಯಪೂರ್ಣ ಹಾಗೂ ಬಾಹ್ಯ ಪೈಪೋಟಿಯನ್ನು ಸ್ಪರ್ಧಾತ್ಮಕ ಮನೋಭಾವದೊಂದಿಗೆ ಮೆಟ್ಟಿ ನಿಲ್ಲಬಲ್ಲ ವ್ಯಕ್ತಿಗಳು ಹೊರಹೊಮ್ಮುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಯುವ ಜನತೆ ಮೇಲೆ ನವಭಾರತದ ಜವಾಬ್ದಾರಿ
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 65ರಷ್ಟಿರುವ ಯುವಜನತೆ ಮೇಲೆ ನವಭಾರತದ ನಿರ್ಮಾಣದ ಹೊಣೆಗಾರಿಕೆ ಇದೆ.
ಇದಕ್ಕೆ ಪೂರಕವಾದ ವ್ಯಕ್ತಿತ್ವ ಹೊಂದಿರುವ ಯುವಶಕ್ತಿಯನ್ನು ಸಿದ್ಧಪಡಿಸುವಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಹಾಗೂ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ (ಐಐಎಂ) ನಂತಹ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಅವರು ತಿಳಿಸಿದರು.