ಹುಬ್ಬಳ್ಳಿ ಜಲಮಂಡಳಿ ಅವಾಂತರಕ್ಕೆ ವೃದ್ಧ ಬಲಿ
ಹುಬ್ಬಳ್ಳಿ, ಡಿಸೆಂಬರ್ 1 : ಜಲಮಂಡಳಿಯ ಕಾಮಗಾರಿ ವ್ಯಕ್ತಿಯೊಬ್ಬನನ್ನು ಬಲಿ ಪಡೆದುಕೊಂಡ ಘಟನೆ ನಗರದ ಮೂರುಸಾವಿರ ಮಠದ ಬಳಿಯ ತಾಡಪತ್ರಿ ಗಲ್ಲಿಯಲ್ಲಿ ಗುರುವಾರ (ನ.೩೦)ರಂದು ನಡೆದಿದೆ. ಜಲಮಂಡಳಿ ಪೈಪ್ ಲೈನ್ ದುರಸ್ಥಿಗಾಗಿ ತೆಗೆದಿದ್ದ ರಸ್ತೆಬದಿಯ ಗುಂಡಿಗೆ ದ್ವಿಚಕ್ರ ವಾಹನ ಸಮೇತ ಬಿದ್ದು ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತನನ್ನು ಘಂಟಿಕೇರಿ ನಿವಾಸಿ ಶರಶ್ಚಂದ್ರ ಗಂಜಾಳ (73) ಎಂದು ಗುರುತಿಸಲಾಗಿದೆ. ನಗರದ ಮೂರುಸಾವಿರ ಮಠದ ಬಳಿ ಇರುವ ತಾಡಪತ್ರಿ ಗಲ್ಲಿಯಲ್ಲಿ ಪೈಪಲೈನ್ ದುರಸ್ಥಿಗಾಗಿ ಗುಂಡಿ ತಗೆದು ಹಾಗೆ ಬಿಡಲಾಗಿದೆ. ಬೆಳಗಿನ ಜಾವ ಗುಂಡಿಯನ್ನು ನೋಡದ ಶರಶ್ಚಂದ್ರ ಅವರು ತಮ್ಮ ಎಂ80 ಸಮೇತವಾಗಿ ಗುಂಡಿಗೆ ಬಿದ್ದಿದ್ದಾರೆ. ಬಿದ್ದ ರಭಸ ಹಾಗೂ ಗುಂಡಿ ಕಿರಿದಾಗಿರುವದರಿಂದ ಮೇಲೆ ಎದ್ದು ಬರಲಾಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಜಲಮಂಡಳಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲೆಂದರಲ್ಲಿ ಮಂಡಳಿಯ ಕಾಮಗಾರಿಗಾಗಿ ಗುಂಡಿ ತೊಡಿ ಬಿಡುತ್ತಾರೆ. ಅದರ ಪಕ್ಕ ಸೂಚನಾ ಫಲಕವನ್ನು ಹಾಕುವದಿಲ್ಲ. ಜಲಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದರು. ಈ ಸಂಬಂಧ ಪಶ್ಚಿಮ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.