'ಪ್ರತ್ಯೇಕ ಧರ್ಮ ಹೋರಾಟಕ್ಕೆ ಪೇಜಾವರ ಶ್ರೀ ಹುಳಿ ಹಿಂಡಬಾರದು'
ಹುಬ್ಬಳ್ಳಿ, ಜುಲೈ 26: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಲಿಂಗಾಯತರು ಹಾಗೂ ಪ್ರತ್ಯೇಕ ಧರ್ಮದ ಬೇಡಿಕೆ ಕುರಿತು ಮಾಹಿತಿ ಕೊರತೆ ಇದ್ದು, ಪ್ರತ್ಯೇಕ ಧರ್ಮದ ಬೇಡಿಕೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಹುಳಿ ಹಿಂಡಬಾರದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದರು.
ನಾಗರಪಂಚಮಿ ನಿಮಿತ್ತ ಬುಧವಾರ ನಗರದ ಆರೂಢ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಹಾಲು ಕುಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಸ್ವಾಮೀಜಿ ಹಿಂದೂ ಧರ್ಮದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅಲ್ಲದೆ ಲಿಂಗಾಯತರ ಬಗ್ಗೆಯೂ ಅಧ್ಯಯನ ಮಾಡಿರಬಹುದು. ಆದರೆ ಆಳವಾದ ಜ್ಞಾನ ಇಲ್ಲ. ಲಿಂಗಾಯತರು ಎದುರಿಸುವ ಸಮಸ್ಯೆಗಳು ಅವರಿಗೆ ತಿಳಿದಿಲ್ಲ ಎಂದರು.

ಧರ್ಮ ಪ್ರತ್ಯೇಕವಾದ ತಕ್ಷಣ ಲಿಂಗಾಯತರು ಹಿಂದೂಸ್ತಾನವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ ಸ್ವಾಮೀಜಿ, ಲಿಂಗಾಯತ ಪ್ರತ್ಯೇಕ ಧರ್ಮವಾಗಲು ಎಲ್ಲ ಅರ್ಹತೆಗಳು ಇವೆ ಎಂದು ಪ್ರತಿಪಾದಿಸಿದರು.
ವೀರಶೈವ-ಲಿಂಗಾಯತ ಶಬ್ದ ಬೇರೆ ಆದ್ರೆ, ಜನಾಂಗ ಒಂದೇ. ವೀರಶೈವ ಧರ್ಮಕ್ಕೆ ಮಾನ್ಯತೆ ಕೋರಿ ಈ ಹಿಂದೆ ಕೇಂದ್ರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ವೀರಶೈವ ಧರ್ಮ ಹಿಂದೂ ಧರ್ಮದ ಒಂದು ಉಪ ಪಂಗಡವೆಂದು ಪರಿಗಣಿಸಿದ ಕೇಂದ್ರ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ಈ ಕಾರಣದಿಂದ ವೀರಶೈವ ಒಂದು ಧರ್ಮವಲ್ಲ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಿಜೆಪಿಯವರು ಅಡ್ಡಗಾಲು ಹಾಕುವ ಬದಲಾಗಿ ಕಳುಹಿಸಿದ ಪ್ರಸ್ತಾವನೆಗೆ ಒಪ್ಪಿಗೆ ಪಡೆಯಲು ಶ್ರಮಿಸಬೇಕು. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮವಾದ್ರೆ ಎರಡು ರಾಜಕೀಯ ಪಕ್ಷಗಳು ಅದರ ಲಾಭವನ್ನು ಪಡೆಯಲಿ.
ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗದೇ ಹೋದರೆ ಹೋರಾಟದ ಹಾದಿ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications