ಧಾರವಾಡ ಜೈಲಿನಲ್ಲಿ ಪಾಕಿಸ್ತಾನಿ ಶಂಕಿತ ಉಗ್ರ 'ಗಾಂಧಿಗಿರಿ'
ಹುಬ್ಬಳ್ಳಿ ಮೇ. 11: ಉಗ್ರಗಾಮಿ ಕೃತ್ಯ ಎಸಗಲು ಸಂಚು ರೂಪಿಸಿದ ಅರೋಪದಡಿ ಬಂಧನಕ್ಕೆ ಒಳಗಾಗಿ 16 ವರ್ಷದಿಂದ ಧಾರವಾಡ ಜೈಲಿನಲ್ಲಿರುವ ಪಾಕಿಸ್ತಾನ ಮೂಲದ ಶಂಕಿತ ಉಗ್ರಗಾಮಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ತನ್ನ ಮೇಲೆ ದಾಖಲಿಸಿರುವ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಮಾಡುವಂತೆ ಆಗ್ರಹಿಸಿ ಶಂಕಿತ ಉಗ್ರ ಮೊಹಮದ್ ಫಹಾದ್ ಮೇ. 03 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ. ಊಟ - ನೀರು ತ್ಯಜಿಸಿ ಹೋರಾಟ ಮಾಡುತ್ತಿದ್ದ. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನಲ್ಲಿ ವಿದ್ವಂಸಕ ಕೃತ್ಯ ಎಸಗುವ ಸಂಚು ರೂಪಿಸುತ್ತಿರುವ ಬಗ್ಗೆ ಫಹಾದ್ ಬಗ್ಗೆ ಕೇಂದ್ರ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಮದ್ ಫಹಾದ್ ನನ್ನು 2006 ರಲ್ಲಿಬಂಧಿಸಲಾಗಿತ್ತು. ಕೆಲವು ಸ್ಫೋಟ ಪ್ರಕರಣ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ಭಾಗಿಯಾದ ಆರೋಪ ಹೊರಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆ ಅಡಿಯಲ್ಲಿ ಹಲವು ಕೇಸು ದಾಖಲಿಸಿ ಫಹಾದ್ ನನ್ನು ಬಂಧಿಸಿ ಧಾರವಾಡ ಜೈಲಿಗೆ ಕಳುಹಿಸಲಾಗಿತ್ತು.

ಜೈಲಿನಲ್ಲಿ ಕೈದಿಗಳ ಜತೆ ನಿರಂತರ ಜಗಳ ಮಾಡುತ್ತಿದ್ದ ಫಹಾದ್ ನನ್ನು ಭದ್ರತೆ ದೃಷ್ಠಿಯಿಂದ ಪ್ರತ್ಯೇಕ ಸೆಲ್ನಲ್ಲಿಇರಿಸಲಾಗಿತ್ತು. ಈ ನಡುವೆ ತನ್ನ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಆಗ್ರಹಿಸಿ ಈತ ಉಪವಾಸ ಸತ್ಯಾಗ್ರಹ ನಡೆಸಿದ್ದ. ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುವಂತೆ ಜೈಲು ಅಧಿಕಾರಿಗಳು ಮನವೊಲಿಸಿದರೂ ಯಾರ ಮಾತು ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಸ್ಥಿತಿಯಲ್ಲಿ ಏರು ಪೇರಾಗಿದ್ದು, ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
Recommended Video
ಆಸ್ಪತ್ರೆಗೆ ಸ್ಥಳಾಂತರಿಸುವ ಮುನ್ನ ಫಹಾದ್ ಮುಷ್ಕರ ನಡೆಸುತ್ತಿದ್ದ ಬಗ್ಗೆ ಉನ್ನತ ಅಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಫಹಾದ್ ನಿಷೇಧಿತ ಉಗ್ರ ಸಂಘಟನೆಯ ಸದಸ್ಯ ಎನ್ನಲಾಗಿದೆ. ಕೇರಳ ಮೂಲದ ವ್ಯಕ್ತಿಗಳ ನೆರವಿನೊಂದಿಗೆ ನಕಲಿ ದಾಖಲಿ ಸೃಷ್ಠಿಸಿ ಭಾರತಕ್ಕೆ ಆಗಮಿಸಿದ್ದ. ಇಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ. ಗುಪ್ತಚರ ಇಲಾಖೆ ಮಾಹಿತಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿತ್ತು.












Click it and Unblock the Notifications