ನಮ್ಮ ಗುರಿ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯಷ್ಟೆ: ಹೊರಟ್ಟಿ
ಹುಬ್ಬಳ್ಳಿ, ಅಕ್ಟೋಬರ್ 23: ನಮ್ಮಗುರಿ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯೇ ಹೊರತು, ಪಂಚಪೀಠ ಅಥವಾ ಬೇರೆ ಯಾರನ್ನು ಟೀಕಿಸುವ ಅವಶ್ಯಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನವೆಂಬರ್ 5ರಂದು ನಡೆಯಲಿರುವ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ರವಿವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ಧರ್ಮಸ್ಥಾಪನೆ, ಅದರ ಮಾನ್ಯತೆ ಮತ್ತು ನಮ್ಮವರ ಉದ್ಧಾರವೆ ಹೊರತು ಇನ್ನಾವುದೇ ಸ್ವಾಮಿಗಳನ್ನು ಟೀಕಿಸುವುದಲ್ಲ. ಹೀಗಾಗಿ ಸ್ವತಂತ್ರಧರ್ಮ ಮಾನ್ಯತೆಯ ಹೋರಾಟಗಾರರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಇಷ್ಟುದಿನ ಬಿಟ್ಟು ಪ್ರತ್ಯೇಕ ಧರ್ಮ ಈಗೇಕೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ನಮಗೆ ಈಗ ಬುದ್ಧಿಬಂದಿದೆ. ಈಗಲಾದರೂ ನಮ್ಮವರ ಉದ್ಧಾರಕ್ಕಾಗಿ ನಾವು ಹೋರಾಡಲೇಬೇಕು. ನಮ್ಮ ಗಮ್ಯ ಸ್ವತಂತ್ರಧರ್ಮ ಮಾನ್ಯತೆ ಒಂದೇ. ಮಾನ್ಯತೆ ಸಿಗುವವರೆಗೆ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.
ಬಸವಣ್ಣನ ಹೆಸರಿನಲ್ಲಿ ಮಠ ನಡೆಸುತ್ತಿರುವ ಮಠಾಧೀಶರು ಲಿಂಗಾಯತ ಧರ್ಮ ಸ್ಥಾಪನೆಗೆ ಕಡ್ಡಾಯವಾಗಿ ಬೆಂಬಲ ನೀಡಲೇಕು. ಇನ್ನೂ ಕೆಲ ಮಠಾಧೀಶರು ಎರಡು ಪರ ವಹಸಿಕೊಂಡು ಮಾತನಾಡುತ್ತಿದ್ದಾರೆ. ಅಂಥವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನಮೃವಾಗಿ ತಿಳಿಸಿದರು. ಸಭೆಯಲ್ಲಿ ಲಿಂಗಾಯತ ಧರ್ಮಗುರುಗಳು ಹಾಗೂ ರಾಜಕೀಯ ಮುಖಂಡರು ಅಲ್ಲದೆ ಸಾರ್ವಜನಕರು ಕೂಡ ಭಾಗವಹಿಸಿದ್ದರು.
ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಸಮಾವೇಶದ ಕುರಿತು ಚರ್ಚಿಸಲಾಯಿತು. ಅಲ್ಲದೆ ಲಿಂಗಾಯತ ಧರ್ಮದ ಹೋರಾಟಕ್ಕೆ ಬಿಜೆಪಿ ಮುಖಂಡರನ್ನು ಕೂಡ ಕರೆತರಲಾಗುವುದು, ನಾವು ಈಗಾಗಲೇ ಆಮಂತ್ರಣ ನೀಡಿದ್ದೇವೆ. ಅವರು ಬರುವ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.












Click it and Unblock the Notifications