National Youth Festival 2023: ಹುಬ್ಬಳ್ಳಿಯಲ್ಲಿ ಕೊನೆ ದಿನದ ಯುವಜನೋತ್ಸವ ಕಾರ್ಯಕ್ರಮ ವೀಕ್ಷಿಸಿದ ಸಿಎಂ, ರಾಜ್ಯಪಾಲರು
ಧಾರವಾಡ, ಜನವರಿ 16: ಹುಬ್ಬಳ್ಳಿ, ಧಾರವಾಡದಲ್ಲಿ ಐದು ದಿನಗಳ ಕಾಲ ನಡೆದ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಆದ್ದರಿಂದ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಅನುರಾಗಸಿಂಗ್ ಠಾಕೂರ್, ಪ್ರಲ್ಹಾದ್ ಜೋಶಿ ಆಗಮಿಸಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಭವನದಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹಾಗೂ ಕೇಂದ್ರ ಸಚಿವರಾದ ಅನುರಾಗಸಿಂಗ್ ಠಾಕೂರ್, ಪ್ರಲ್ಹಾದ್ ಜೋಶಿ ಅವರಿಗೆ ಪಂಜಾಬ್ ವಾದ್ಯ ಮೇಳದ ಮೂಲಕ ಸ್ವಾಗತ ಕೋರಲಾಯಿತು.
ಯುವಜನೋತ್ಸವದಲ್ಲಿ ಪಾಲ್ಗೊಂಡ ವಿವಿಧ ರಾಜ್ಯಗಳ ಯುವಕ, ಯುವತಿಯರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಲ್ಲರಿಗೂ ಶುಭಾಶಯ ತಿಳಿಸಿದರು. ನಂತರ ಸಿಎಂ ಹಾಗೂ ರಾಜ್ಯಪಾಲರು ವೇದಿಕೆಯ ಕಾರ್ಯಕ್ರಮದತ್ತ ತೆರಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ, ಪ್ರದೀಪ್ ಶೆಟ್ಟರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗಮನ ಸೆಳೆದ ಆಹಾರ ಮೇಳ
ಹಾಗೆಯೇ ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಜನರ ನಾಲಿಗೆಗೆ ದೇಶದ ಹಲವು ಖಾದ್ಯಗಳ ರುಚಿ ತಲುಪಿಸುವ ಕೆಲಸವನ್ನು ರಾಷ್ಟ್ರೀಯ ಯುವ ಜನೋತ್ಸವ ಮಾಡಿದೆ. ವಿವಿಧ ರಾಜ್ಯಗಳ ಆಹಾರೋತ್ಸವ ಕೈ ಬೀಸಿ ಸ್ವಾಗತಿಸುತ್ತಿದೆ. ಬಗೆ ಬಗೆಯ ಖಾದ್ಯಗಳು, ನಾನಾ ಬಗೆಯ ಸ್ವಾದ, ಸಿಹಿ, ಖಾರ, ಉಪ್ಪು, ಹುಳಿ, ಶಾಖಾಹಾರ, ಮಾಂಸಾಹಾರ ಹೀಗೆ ಬಹುದೊಡ್ಡ ಆಹಾರ ಸಂತೆಯೇ ಧಾರವಾಡದಲ್ಲಿ ಅನಾವರಣಗೊಂಡಿತ್ತು.
ಈವರೆಗೂ ಕಂಡರಿಯದ ಆಹಾರ, ಸಿದ್ಧಪಡಿಸಿದ ಆಹಾರ ನೋಡಲು, ಸವಿಯಲು, ಖರೀದಿಸಿ ಮನೆಗೆ ಕೊಂಡೊಯ್ಯಲು ಈ ಆಹಾರ ಮೇಳ ಸಿದ್ಧವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹೊಸ ಆಹಾರದ ರುಚಿ ನೋಡ ಬಯಸುವವರಿಗೆ ಇದು ಸುವರ್ಣಾವಕಾಶವೂ ಆಗಿತ್ತು. ಒಟ್ಟು 50 ಆಹಾರ ಮಳಿಗೆಗಳನ್ನು ಕೆಸಿಡಿ ಮೈದಾನದಲ್ಲಿ ತೆರೆಯಲಾಗಿದ್ದು, ಎಲ್ಲವೂ ವಿಶೇಷ, ಎಲ್ಲವೂ ವಿನೂತನ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲಾ ಬಗೆಯ ವೈಶಿಷ್ಟ್ಯಗಳು ಲಭ್ಯವಿದ್ದವು. ಪೂರ್ವಾಂಚಲ, ಪಶ್ಚಿಮ ರಾಜ್ಯಗಳ ತಿಂಡಿಗಳನ್ನು ಕಣ್ಣಾರೆ ನೋಡಿ ತಿಳಿದು ಸೇವಿಸಲು ಇದು ಸದಾವಕಾಶವಾಗಿದೆ. ಒಟ್ಟು 50 ಆಹಾರ ಮಳಿಗೆಗಳಿದ್ದು, ಇದೇ 16 ರ ವರೆಗೆ ಮಳಿಗೆಗಳಲ್ಲಿ ಆಹಾರ ಲಭ್ಯವಿರಲಿದೆ. ಸ್ಥಳದಲ್ಲೇ ಸವಿದು, ಮನೆಗೂ ಕೊಂಡೊಯ್ಯಲು ಅವಕಾಶವನ್ನು ಕಲ್ಪಿಸಲಾಗಿತ್ತು.












Click it and Unblock the Notifications