ಭಾರತ ಜೋಡೋ ಪಾದಯಾತ್ರೆಯಲ್ಲಿ ರಾರಾಜಿಸಲಿವೆ ಬೆಂಗೇರಿಯ ರಾಷ್ಟ್ರಧ್ವಜ
ಹುಬ್ಬಳ್ಳಿ, ಆಗಸ್ಟ್ 23 : ಆಜಾದಿ ಕಾ ಅಮೃತ ಮಹೋತ್ಸವ, ಹರ್ ಘರ್ ತಿರಂಗಾ ಈ ಯಾತ್ರೆಯಲ್ಲಿ ದೇಶಾದ್ಯಂತ ಹುಬ್ಬಳ್ಳಿಯ ಬೆಂಗೇರಿಯಲ್ಲಿ ತಯಾರಿಸಲ್ಪಡುವ ರಾಷ್ಟ್ರ ಧ್ವಜಗಳು ರಾರಾಜಿಸಿದ್ದವು. ದೆಹಲಿಯ ಕೆಂಪು ಕೋಟೆ ಸೇರಿದಂತೆ ಪ್ರತಿ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಗಗನದ ಎತ್ತರಕ್ಕೆ ಹಾರಾಡಿದ್ದ ಈ ಬಾವುಟ ಮತ್ತೆ ದೇಶದ 21 ರಾಜ್ಯಗಳಲ್ಲಿ ಹಾರಾಡಲು ಸಜ್ಜಾಗಿವೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇಡೀ ದೇಶದಲ್ಲಿಯೇ ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ ಅಧಿಕೃತ ತಾಣವಾಗಿದೆ. ಕಾಂಗ್ರೆಸ್ ನಿಂದ ದೇಶಾದ್ಯಂತ ಬೃಹತ್ ಪಾದಯಾತ್ರೆ ಕೂಡ ಹಮ್ಮಿಕೊಂಡಿದ್ದು, ಪಾದಯಾತ್ರೆಯಲ್ಲಿ ಈ ಪಾದಯಾತ್ರೆಯಲ್ಲೂ ಬೆಂಗೇರಿ ಧ್ವಜಗಳು ಹಾರಾಡಲಿವೆ.
148 ದಿನಗಳ ಕಾಲ ಪಾದಯಾತ್ರೆ
ಸೆಪ್ಟೆಂಬರ್ 7ರಿಂದ ಭಾರತ್ ಜೋಡೋ ಪಾದಯಾತ್ರೆಗೆ ಸಜ್ಜಾಗಿರುವ ಕಾಂಗ್ರೆಸ್, ಒಟ್ಟು ಹನ್ನೆರಡು ರಾಜ್ಯಗಳಲ್ಲಿ ಯಾತ್ರೆ ಹಮ್ಮಿಕೊಂಡಿದೆ. ಕನ್ಯಾಕುಮಾರಿಯಿಂದ ಆರಂಭ ಆಗಲಿರುವ ಪಾದಯಾತ್ರೆ ಜಮ್ಮು ಕಾಶ್ಮೀರವರೆಗೂ ನಡೆಯಲಿದೆ. ಭಾರತ್ ಜೋಡೋ ಪಾದಯಾತ್ರೆ ಬರೋಬ್ಬರಿ 3,571 ಕಿಮೀ ನಡೆಯಲಿದೆ. 148 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಒಟ್ಟು 68 ಲೋಕಸಭಾ ಕ್ಷೇತ್ರಗಳು, 203 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಾದು ಹೋಗಲಿದೆ.

ಕರ್ನಾಟಕದಲ್ಲಿ 21 ದಿನ ಪಾದಯಾತ್ರೆ ನಡೆಯಲಿದ್ದು, 511 ಕಿಲೋಮೀಟರ್ ಯಾತ್ರೆ ಸಾಗಲಿದೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಸಂಚಾರ ಮಾಡಲಿರುವ ಭಾರತ್ ಜೋಡೋ, ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಪಾದಯಾತ್ರೆ ನಡೆಯಲಿದೆ.

ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ನಮ್ಮ ರಾಷ್ಟ್ರಧ್ವಜ ತಯಾರಿಕಾ ಘಟಕದಲ್ಲಿ ಖಾದಿಯಿಂದ ತಯಾರಿಸಿದ ತ್ರಿವರ್ಣ ರಾಷ್ಟ್ರಧ್ವಜಗಳನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಖರೀದಿಸಿದ್ದು , ಇವುಗಳನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ಹಸ್ತಾಂತರಿಸಲಿದ್ದಾರೆ. ಸದರಿ ಧ್ವಜಗಳನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸಿನ ಎಲ್ಲಾ ಪ್ರಮುಖ ನಾಯಕರುಗಳು, ಪಾದಯಾತ್ರೆಯ 148 ದಿನಗಳ ಕಾಲ 3,571 ಕಿಮೀ ಉದ್ದಗಲಕ್ಕೂ ಪ್ರದರ್ಶಿಸಲಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆ ಬಗ್ಗೆ ಡಿಕೆ ಶಿವಕುಮಾರ್
ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಸುಮಾರು 510 ಕಿ.ಮೀ. ನಡೆಯಲಿದ್ದು, ಗುಂಡ್ಲುಪೇಟೆಯಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ, ತುರುವೇಕೆರೆ, ಹಿರಿಯೂರು, ಚಳ್ಳಕೆರೆ, ಬಳ್ಳಾರಿ ಮೂಲಕ ರಾಯಚೂರು ಮಾರ್ಗವಾಗಿ ತೆಲಂಗಾಣ ತಲುಪುತ್ತಾರೆ. ಒಟ್ಟು 21 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ರಾಜ್ಯದ ಗಡಿ ಪ್ರವೇಶಿಸುವಾಗ ಅರಣ್ಯ ಪ್ರದೇಶವಿದ್ದು, ಈ ಭಾಗದಲ್ಲಿ ಮಾಡುವುದು ಬೇಡ ಎಂದು ಕೇರಳ ಪೊಲೀಸರು ಮನವಿ ಮಾಡಿದ್ದಾರೆ. ಅದೇ ರೀತಿ ರಾಜ್ಯದ ಭಾಗದಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ ಎಂದು ಚರ್ಚೆ ಮಾಡುತ್ತೇವೆ ಎಂದು ಚಳ್ಳಕೆರೆಯಲ್ಲಿ ಡಿಕೆ ಶಿವಕುಮಾರ್ ಹೇಳಿದರು.
ನಾವು ಕಾಂಗ್ರೆಸ್ ಪಕ್ಷದವರು. ನಮಗೆ ಹೋರಾಟದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ವಿರೋಧ ಪಕ್ಷದ ನಾಯಕರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಬೊಮ್ಮಾಯಿ ಸಾಹೇಬರೆ, ಕಟೀಲ್ ಸಾಹೇಬರೇ ನಾನು ಯಾವುದೇ ಕರೆ ನೀಡದಿದ್ದರೂ ಅನೇಕ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಅಧಿಕೃತವಾಗಿ ಕರೆ ನೀಡಿ ಮಂತ್ರಿಗಳ ಕಾರ್ಯಕ್ರಮದ ಕಡೆಗಳಲ್ಲಿ ನಿಮ್ಮ ಲಂಚ ಹಾಗೂ 40% ಕಮಿಷನ್ ವಿರೋಧಿಸಿ ಅದೇ ಕಪ್ಪು ಬಾವುಟ ಹಿಡಿದು ಅಡ್ಡಿ ಮಾಡಲು ಹೊರಟರೆ ನಿಮ್ಮ ಕಾನೂನು ವ್ಯವಸ್ಥೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications