ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಅನುಮತಿ
ಹುಬ್ಬಳ್ಳಿ, ನವೆಂಬರ್ 9 : ರಾಜ್ಯಾದ್ಯಂತ ಕಾವೇರಿಸಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದ ಬಿಸಿಯನ್ನು ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ತಣ್ಣಗಾಗಿಸಿದ್ದಾರೆ. ಕೆಲವು ನಿಯಮಗಳನ್ನು ಜಾರಿ ಮಾಡಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶವನ್ನು ನೀಡಿ ವಿವಾದ ದೊಡ್ಡದಾಗದಂತೆ ಮಾಡಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಿದ ನಂತರ ಎಐಎಂಐಎಂ ಮತ್ತು ಕೆಲವು ದಲಿತ ಸಂಘಟನೆ ಟಿಪ್ಪು ಜಯಂತಿ ಮಾಡುವುದಕ್ಕೆ ಅನುಮತಿ ನೀಡಬೇಕೆಂದು ಪಾಲಿಕೆಗೆ ಮನವಿ ಮಾಡಿಕೊಂಡಿದ್ದರು. ಇದೀಗ ಮೇಯರ್ ಟಿಪ್ಪು ಜಯಂತಿ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಜೊತೆಗೆ ಉಳಿದ ಎಲ್ಲಾ ಜಯಂತಿ ಹಾಗೂ ಕಾರ್ಯಕ್ರಮಗಳನ್ನು ಈದ್ಗಾ ಮೈದಾನದಲ್ಲಿ ಮಾಡುವುದಕ್ಕೆ ಮೇಯರ್ ಒಪ್ಪಿಗೆ ಸೂಚಿಸಿದ್ದಾರೆ.
ಟಿಪ್ಪು ಜಯಂತಿಗೆ ಅವಕಾಶ ಕೇಳಿದ ಬೆನ್ನಲ್ಲೇ ಈದ್ಗಾ ಮೈದಾನಕ್ಕಾಗಿ ಸಂಘಟನೆಗಳ ಬೇಡಿಕೆ
ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸೇರಿದಂತೆ ಎಲ್ಲ ಜಯಂತಿ ಆಚರಣೆಗೆ ಅನುಮತಿ ನೀಡಲಾಗಿದ್ದು, ಕೆಲವು ನೀತಿ ನಿಯಮಗಳನ್ನು ಹಾಕಿ ಅನುಮತಿ ಕೊಡಲಾಗಿದೆ. ಎಐಎಂಐಎಂ ಪಕ್ಷದ ಜಿಲ್ಲಾ ಸಂಯೊಜಕ ವಿಜಯ ಗುಂಟ್ರಾಳ ಆಚರಣೆಗೆ ಅನುಮತಿ ಕೇಳಿದ್ದರು. ಅಲ್ಲದೇ ಒನಕೆ ಓಬವ್ವ ಹಾಗೂ ರತಿ ಮನ್ಮಥ ಪ್ರತಿಷ್ಠಾಪನೆಗೆ ಹೋಳಿ ಆಚರಣೆಗೂ ಅವಕಾಶ ಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಪಾಲಿಕೆಯಲ್ಲಿ ಸುದೀರ್ಘ ಸಭೆ ನಡೆಸಿದ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಕೆಲವು ಷರತ್ತುಗಳನ್ನು ಹಾಕಿ ಎಲ್ಲಾ ಜಯಂತಿ ಹಾಗೂ ಕಾರ್ಯಕ್ರಮಗಳನ್ನು ಆಚರಿಸಲು ಅನುಮತಿ ನೀಡಿದ್ದಾರೆ.
ಇನ್ನು ಮುಂದೆ ಈದ್ಗಾ ಮೈದಾನದಲ್ಲಿ ಎಲ್ಲಾ ಜಯಂತಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇನ್ನೂ ಮುಂದೆ ಈದ್ಗಾ ಮೈದಾನದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಬಹುದು. ಯಾರೇ ಕಾರ್ಯಕ್ರಮ ಮಾಡಿದರೆ ಹತ್ತು ಸಾವಿರ ಠೇವಣಿ ಇಡಬೇಕು. ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಎಂದು ಮೇಯರ್ ಅಂಚಟಗೇರಿ ಸಭೆ ನಂತರ ತಿಳಿಸಿದ್ದಾರೆ.
ಎಐಎಂಐಎಂ ಜಿಲ್ಲಾಧ್ಯಕ್ಷ ನಜೀರ್ ಹೊನ್ನಾಳ ವಿರೋಧ
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮನವಿ ವಿಚಾರ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಜಿಲ್ಲಾ ಅಧ್ಯಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ತಾತನ ಕಾಲದಿಂದಲೂ ಟಿಪ್ಪು ಜಯಂತಿ ಮಾಡಿಕೊಂಡಿದ್ದೇವೆ, ಮುಂದೆಯೂ ಮಾಡುತ್ತೇವೆ. ಟಿಪ್ಪುವಿನ ಮೇಲೆ ನಮಗೆ ಅಪಾರ ಗೌರವ ಇದೆ. ಆದರೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇಡೀ ದೇಶದಲ್ಲಿ ಮಾಡುವುದಕ್ಕೆ ನಮಗೆ ಹೆಮ್ಮೆಯಿದೆ, ಆದರೆ ಇಲ್ಲಿ ಮಾಡುವುದಕ್ಕೆ ನಮ್ಮ ವಿರೋಧವಷ್ಟೇ ಎಂದು ಹೇಳಿದ್ದಾರೆ.