ಮನೆ ಮುಂದೆ ನಿಲ್ಲಿಸಿದ ಬೈಕ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ದೂರು ದಾಖಲು
ಹುಬ್ಬಳ್ಳಿ, ಮೇ 23: ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ 200-ಎನ್.ಎಸ್ ಬೈಕ್ಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ನೋಡ ನೋಡುತ್ತಿದ್ದಂತೆ ಸಂಪೂರ್ಣ ಬೈಕ್ ಹೊತ್ತಿ ಉರಿದಿದ್ದು, ಇದರ ಪರಿಣಾಮವಾಗಿ ಸುತ್ತಮುತ್ತಲಿನ ಮನೆಗಳಿಗೂ ಹೊಗೆ ಆವರಿಸಿಕೊಂಡಿದೆ. ಅಲ್ಲದೇ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ಗಳಿಗೂ ಬೆಂಕಿ ತಗುಲಿದೆ.
ಇನ್ನು ಹುಬ್ಬಳ್ಳಿಯ ನವನಗರದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಗೊತ್ತಾಗಬೇಕಿದೆ. ವೈಯಕ್ತಿಕ ಕಾರಣಕ್ಕೆ ಕೃತ್ಯ ನಡೆದಿದೆ ಎಂದು ಶಂಕೆ ವ್ಯಕ್ತವಾಗುತ್ತಿದೆ. ಆದರೂ ಪೊಲೀಸ್ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸೈಟ್ ಹಣ ಹಿಂದಿರುಗಿಸಲು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ಗೆ ಗ್ರಾಹಕರ ಆಯೋಗದ ಆದೇಶ
ಧಾರವಾಡ: ಹುಬ್ಬಳ್ಳಿಯ ಸಗೈ ರಾಜದಾಸ್, ಶೈಲಜಾ ಹಣಗಿ, ಶಕುಂತಲಾ ರಾವಲ್ ಹಾಗೂ ನಿಂಗಪ್ಪ ಮುಳಗುಂದ ಮತ್ತು ಪರಪ್ಪ ದಂಡಿನ್ ಎನ್ನುವವರು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಜೊತೆ ಅವರು ಈಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಗಾಮನಗಟ್ಟಿ ಲೇಔಟನ್ ಪ್ಲಾಟ್ ನಂ.29,44,47 ಮತ್ತು 45ರ ಖರೀದಿಗೆ 07/02/2014ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರತಿಯೊಬ್ಬರು ಕಂತುಗಳಲ್ಲಿ ತಲಾ 5,24,000 ರೂಪಾಯಿ, 3,15,500 ರೂಪಾಯಿ ಹಾಗೂ 3,80,000 ರೂಪಾಯಿಗಳನ್ನು ಮುಂಗಡವಾಗಿ ಕಟ್ಟಿದ್ದರು.
ಹಲವಾರು ವರ್ಷಗಳಾದರೂ ಎದುರುದಾರರು ಲೇಔಟ್ ಕೆಲಸ ಪೂರ್ತಿಗೊಳಿಸಿರಲಿಲ್ಲ. ಅಲ್ಲದೇ ಒಪ್ಪಂದದಂತೆ ದೂರುದಾರರಿಗೆ ಆ ಸೈಟುಗಳ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಪೃಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ನಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಎದುರುದಾರ ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ನವರು ವಕೀಲರ ಮೂಲಕ ಹಾಜರಾಗಿ ಲೇಔಟ್ ಮಾಡಲು ಉದ್ದೇಶಿಸಿದ್ದ ಇಟಿಗಟ್ಟಿ ಗ್ರಾಮದ ಬ್ಲಾಕ್ ನಂ.22/1 ಜಮೀನನ್ನು ಏಮ್ಸ್ ಸ್ಥಾಪನೆಗಾಗಿ ಸರ್ಕಾರದವರು ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಕಾರಣ ಲೇಔಟ್ ಕೆಲಸ ಪೂರ್ಣಗೊಳಿಸಿಸಲಾಗಿಲ್ಲ. ಈ ಬಗ್ಗೆ ತಮಗೆ ಸರ್ಕಾರದ ಪರಿಹಾರವು ಬಂದಿಲ್ಲ ಅಂತಾ ಹೇಳಿ ಎಲ್ಲಾ ದೂರುದಾರರ ಹಣ ವಾಪಸ್ ಕೊಡಲು ತಯಾರು ಇರುವುದಾಗಿ ಹೇಳಿ ಆಕ್ಷೇಪಣೆ ಹಾಕಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಅವರು 2014ರಲ್ಲಿ ಪ್ರತಿಯೊಬ್ಬ ದೂರುದಾರನಿಂದ ಲಕ್ಷಗಟ್ಟಲೇ ಹಣ ಪಡೆದುಕೊಂಡು ಅದನ್ನು ಲೇಔಟ್ ನಿರ್ಮಾಣದ ತಮ್ಮ ಕೆಲಸಕ್ಕೆ ಎದುರುದಾರರು ಉಪಯೋಗಿಸಿಕೊಂಡಿದ್ದಾರೆ.
ದೂರು ದಾಖಲಿಸುವವರೆಗೆ ದೂರುದಾರರ ಹಣ ಹಿಂದಿರುಗಿಸದೇ ಇರುವುದು ತಪ್ಪು ಅಂತಾ ಮಾನ್ಯ ಆಯೋಗ ತೀರ್ಪು ನೀಡಿ ಪ್ರತಿಯೊಬ್ಬ ದೂರುದಾರರಿಗೆ ಅವರು ನೀಡಿದ ಹಣ ಮತ್ತು ಅದರ ಮೇಲೆ 11/06/2017 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಮತ್ತು ಈ ಪ್ರಕರಣಗಳ ಖರ್ಚು ವೆಚ್ಚ ಅಂತಾ ತಲಾ 10,000 ರೂಪಾಯಿಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.












Click it and Unblock the Notifications