ಹುಬ್ಬಳ್ಳಿಯಲ್ಲಿ 6 ಕೆ.ಜಿ.ಗಾಂಜಾ ವಶಕ್ಕೆ, ಇಬ್ಬರ ಬಂಧನ
ಹುಬ್ಬಳ್ಳಿ, ಅಕ್ಟೋಬರ್, 25: ಕಸಬಾ ಪೇಟೆ ಪೊಲೀಸರು ಟಾಟಾ ಇಂಡಿಗೋ ಕಾರಿನಲ್ಲಿ ಸಾಗಿಸುತ್ತಿದ್ದ 6 ಕೆ.ಜಿ. ಗಾಂಜಾ ವಶಪಡಿಸಿಕೊಂಡು, ಇಬ್ಬರನ್ನು ಸೋಮವಾರ ಬಂಧಿಸಿದ್ದಾರೆ. ನಗರದ ರೈಲ್ವೆ ನಿಲ್ದಾಣದಿಂದ ಹೊರಟ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಇಲ್ಲಿಯ ನ್ಯೂ ಇಂಗ್ಲಿಷ್ ಶಾಲೆ ಹತ್ತಿರ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.
ಧಾರವಾಡ ಹೊಯ್ಸಳ ನಗರದ ಸುನೀಲ ಶ್ರೀಮಂತ ಮುಳೆ (36), ಹುಬ್ಬಳ್ಳಿಯ ಚೇತನಾ ಕಾಲೋನಿಯ ಮಲ್ಲಿಕಾರ್ಜುನ ಚನ್ನಕೇಶವ ಮಜ್ಜೇರಿ (36) ಬಂಧಿತರು. ಇವರಿಂದ 4 ಮೊಬೈಲ್ ಫೋನ್ ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಸುಂಟಿಕೊಪ್ಪದ ಕಾಫಿ ತೋಟದಲ್ಲಿ ಗಾಂಜಾ ಬೆಳೆದಿದ್ದವನ ಬಂಧನ]
ಆರು ಕೆ.ಜಿ ಗಾಂಜಾ, ಕಾರು, ನಾಲ್ಕು ಮೊಬೈಲ್ ಫೋನ್ ಇವುಗಳ ಒಟ್ಟು ಮೌಲ್ಯ 3.51 ಲಕ್ಷ ರುಪಾಯಿ ಎಂದು ಗೊತ್ತಾಗಿದೆ. ಗಾಂಜಾ ಎಲ್ಲಿಗೆ ಸರಬರಾಜು ಮಾಡುತ್ತಿದ್ದರು. ಈ ಜಾಲದ ಜೊತೆಗೆ ಸಂಪರ್ಕದಲ್ಲಿದ್ದವರು ಯಾರು ಎಂಬ ಕುರಿತು ವಿಚಾರಣೆ ನಡೆಯುತ್ತಿದೆ.
ಕೌಟುಂಬಿಕ ಕಲಹ, ಆತ್ಮಹತ್ಯೆ: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಇಬ್ಬರ ಪೈಕಿ ಒಬ್ಬರು ಮೃತಪಟ್ಟ ಘಟನೆ ಕಲಘಟಗಿ ತಾಲೂಕು ಗಳಗಿ ಹೊಲಕೊಪ್ಪದಲ್ಲಿ ನಡೆದಿದೆ.[ಮದುವೆಗೆ ಅಡ್ಡಿಯಾದರೆಂದು ಜನ ಬಿಟ್ಟು ಹೊಡೆಸಿದಳೆ ಯುವತಿ?]
ಮಂಜುನಾಥ ಮಟ್ಟಿ (30) ಮೃತರು. ಇವರ ಜತೆಗೆ ಅತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಬದುಕಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.