ಹುಬ್ಬಳ್ಳಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಿ. ಎಂ. ಇಬ್ರಾಹಿಂ!
ಹುಬ್ಬಳ್ಳಿ, ಜನವರಿ 31; ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿರುವ ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ ಎಸ್. ಆರ್. ಪಾಟೀಲ್ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಎಸ್. ಆರ್. ಪಾಟೀಲ್ ಭೇಟಿಗಾಗಿಯೇ ಸಿ. ಎಂ. ಇಬ್ರಾಹಿಂ ಹುಬ್ಬಳ್ಳಿಗೆ ಆಗಮಸಿದ್ದರು. ಉಭಯ ನಾಯಕರು ಖಾಸಗಿ ಹೋಟೆಲ್ನಲ್ಲಿ ಮಾತುಕತೆ ನಡೆಸಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಯನ್ನು ಮಾಡಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಸಿ. ಎಂ. ಇಬ್ರಾಹಿಂ, "ಎಸ್. ಆರ್. ಪಾಟೀಲ್ ಜೊತೆಗಿನ ಸಭೆ ಶೇ 100 ರಷ್ಟು ಸಕ್ಸಸ್ ಫುಲ್ ಆಗಿದೆ" ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಎಸ್. ಆರ್. ಪಾಟೀಲ್ಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು.

"ನನಗೆ ಈಗ ಮೂರು ಆಯ್ಕೆಗಳಿವೆ. ಜೆಡಿಎಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷ. ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಚುನಾವಣೆಗೂ ಮುನ್ನ ಹಲವು ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ" ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.
"ಫೆಬ್ರವರಿಯಲ್ಲಿ ಕೂಡಲಸಂಗಮದಿಂದ ಅಲಿಂಗ (ಅಲ್ಪಸಂಖ್ಯಾತ-ಲಿಂಗಾಯತ) ಎಂಬ ಚಳವಳಿ ಆರಂಭಿಸಲಿದ್ದೇವೆ. ನನಗೆ ಹಲವಾರು ದೊಡ್ಡ ದೊಡ್ಡ ನಾಯಕರ ಬೆಂಬಲವಿದೆ. ಅವರ ಹೆಸರುಗಳನ್ನು ಹೇಳುವುದಿಲ್ಲ. ಅವರೆಲ್ಲ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಈ ಚಳವಳಿ" ಎಂದು ಸಿ. ಎಂ. ಇಬ್ರಾಹಿಂ ತಿಳಿಸಿದರು.
"ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಎಂದು ಎಸ್. ಆರ್. ಪಾಟೀಲ್ ಮನವಿ ಮಾಡಿದರು. ಆದರೆ ಅದು ಮುಗಿದ ಅಧ್ಯಾಯ ಒಂದು ಸಲ ಡ್ಯಾಂ ನಿಂದ ನೀರು ಹರಿದು ಹೋದರೆ ಮುಗಿಯಿತು" ಎಂದು ಹೇಳುವ ಮೂಲಕ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದಾಗಿ ಮತ್ತೊಮ್ಮೆ ಹೇಳಿದರು.
ಎಸ್. ಆರ್. ಪಾಟೀಲ್ ಮಾತನಾಡಿ, "ಸಿ. ಎಂ. ಇಬ್ರಾಹಿಂ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಸ್ಥಾನ ಕೈ ತಪ್ಪಿದ್ದಕ್ಕೆ ಬಹಳ ನೊಂದಿದ್ದಾರೆ. ಅವರಿಗೆ ಸಮಾಧಾನ ಹೇಳಿದ್ದೇನೆ. ಪಕ್ಷದಲ್ಲಿಯೇ ಮುಂದುವರೆಯಬೇಕು ಎಂದು ಮನವಿ ಮಾಡಿದ್ದೇನೆ" ಎಂದರು.
"ವಿಧಾನ ಪರಿಷತ್ನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಮಾಧ್ಯಮದ ಮುಂದೆ ಎಲ್ಲಾ ವಿಚಾರ ಹೇಳುವುದಿಲ್ಲ. ಪ್ರಸಂಗ ಬಂದಾಗ ಹೇಳುತ್ತೇವೆ. ಕಾಂಗ್ರೆಸ್ನಲ್ಲಿದ್ದೇನೆ. ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಸಿ. ಎಂ. ಇಬ್ರಾಹಿಂ ದೊಡ್ಡ ನಾಯಕರು ಅವರು ಪಕ್ಷ ಬಿಟ್ಟರೆ ತೊಂದರೆ ಆಗಲಿದೆ" ಎಂದು ಎಸ್. ಆರ್. ಪಾಟೀಲ್ ಹೇಳಿದರು.
ಪಕ್ಷದಿಂದ ಹೊರಗೆ; "ನಾನು ಪಕ್ಷದಿಂದ ಹೊರ ಹೋದ ಮೇಲೆ ಅಲ್ಪ ಸಂಖ್ಯಾತರಿಗೆ ಮರ್ಯಾದೆ ಸಿಗುತ್ತದೆ ಎಂದು ಮೊದಲೇ ಹೇಳಿದ್ದೆ. ಈಗ ಯು. ಟಿ. ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ಮಾಡಲಾಗಿದೆ. ಹುಲಿ ಶಿಕಾರಿಗೆ ಕುರಿ ಕಟ್ಟಿದರೆ ಆಗುವುದಿಲ್ಲ. ಹುಲಿಯನ್ನೇ ತರಬೇಕಾಗುತ್ತದೆ" ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.
"ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಸಿದ್ದರಾಮಯ್ಯರನ್ನು ತೆಗೆದುಹಾಕಿ ತನ್ವೀರ್ ಸೇಠ್ ಅವರನ್ನು ನೇಮಿಸಲಿ. ಡಿ. ಕೆ. ಶಿವಕುಮಾರ್ ಸ್ಥಾನಕ್ಕೆ ಯು. ಟಿ. ಖಾದರ್ ನೇಮಿಸಲಿ" ಎಂದು ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
"ನಾನು ಬಡವ ನನ್ನ ಬಳಿ ಹಣ ಇಲ್ಲ. ಮರಳಿ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೂ ಇಲ್ಲ. ನನ್ನನ್ನು ನೀವೇ ಬೆಳೆಸಿದ್ದೀರಿ. ಇನ್ನು ಮುಂದೆಯೂ ಕೈ ಹಿಡಿದು ನಡೆಸಬೇಕು. ಮುಂದಿನ ದಾರಿ ಏನಾಗುತ್ತದೆ ನೋಡೋಣ. ನನ್ನ ಶಾಪ ಭಾರೀ ಕೆಟ್ಟದ್ದು, ಅದು ಇವಾಗ ಅವರಿಗೆ ತಟ್ಟಿದೆ. ನಾನು ವಿಷಕಂಠನಂತೆ ಇಲ್ಲಿಯ ತನಕ ಎಲ್ಲವನ್ನು ನುಂಗಿಕೊಂಡಿದ್ದೆ" ಎಂದರು.












Click it and Unblock the Notifications