ಧಾರವಾಡದಲ್ಲಿ ಹೆಚ್ಚಿದ ಅಪೌಷ್ಟಿಕತೆ: ಒಂದೇ ತಿಂಗಳಲ್ಲಿ 20 ಮಕ್ಕಳು ಸಾವು
ಹುಬ್ಬಳ್ಳಿ, ಡಿಸೆಂಬರ್ 31: ಹುಬ್ಬಳ್ಳಿ ಧಾರವಾಡ ಸೇರಿದಂತೆ ಧಾರವಾಡ ಜಿಲ್ಲಾದ್ಯಂತ ಅಪೌಷ್ಟಿಕ ಆಹಾರ ಸೇವೆನೆಯಿಂದ ಮಕ್ಕಳ ಪ್ರಾಣ ಸಂಕಷ್ಟಕ್ಕೆ ಸಿಲುಕಿರುವ ಪ್ರಕರಣಗಳು ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಬರೊಬ್ಬರಿ 75 ಮಕ್ಕಳಿಗೆ ಅಪೌಷ್ಟಿಕತೆಯಿಂದ ನರಳುತ್ತಿದ್ದು, ಒಂದೇ ತಿಂಗಳಲ್ಲಿ 20 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಗುಣಮಟ್ಟದ ಆಹಾರ ಕೊರತೆ ಮತ್ತು ಕಳಪೆ ಆಹಾರ ಸೇವನೆಯಿಂದ, ಜೊತೆಗೆ ಆಹಾರ ಪದ್ಧತಿ ಬದಲಾವಣೆಯಿಂದ ಬಹುತೇಕರಲ್ಲಿ ಅಪೌಷ್ಟಿಕತೆ ಹೆಚ್ಚಳವಾಗಿದೆ. ಅಪೌಷ್ಟಿಕತೆಯಿಂದ ಮತ್ತು ವಿವಿಧ ಕಾರಣಗಳಿಂದ, ಸುಮಾರು 20 ಕ್ಕೂ ಹೆಚ್ಚು ಮಕ್ಕಳು ಅಕ್ಟೋಬರ್ ಒಂದೇ ತಿಂಗಳಲ್ಲಿ ಮೃತಪಟ್ಟಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಈಗ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ನಡೆಸಬೇಕಿದೆ.

ಇನ್ನು ಮಗು ಜನಿಸುತ್ತಿದ್ದಂತೆ ಸಾವನ್ನಪ್ಪುವ ಸಂಖ್ಯೆ ಹೆಚ್ಚಳವಾಗಿತ್ತಿದೆ. ಅದಕ್ಕೆ ಕಾರಣ ಸೇವಿಸುವ ಆಹಾರ ಪದ್ದತಿ. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವಿಸದೇ ಇರುವುದರಿಂದ, ಅದೆಷ್ಟೋ ಮಕ್ಕಳು ಹುಟ್ಟುತ್ತಲೇ ಮೃತಪಡುತ್ತಿವೆ. ಇನ್ನು ಬದುಕುಳಿದ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬದು ಸತ್ಯವಾಗಿದೆ.
ಇದನ್ನು ತಡೆಯುವ ಉದ್ದೇಶದಿಂದಲೇ ಅಂಗನವಾಡಿ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಆದರೂ ಸಹ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಬೇಸರದ ಸಂಗತಿಯಾಗಿದೆ. ಜೊತೆಗೆ ಆರೋಗ್ಯ ಇಲಾಖೆ ಎಚ್ಚತ್ತುಕೊಳ್ಳಬೇಕಾಗಿದೆ. ಈಗಾಗಲೇ ಕಿಮ್ಸ್ ಆಸ್ಪತ್ರೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವಿಶೇಷ ಹಾಸಿಗೆ ವ್ಯವಸ್ಥೆ ಮಾಡಿ, ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.
ಇದೀಗ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅಪೌಷ್ಠಿಕತೆ ತೊಲಗಿಸಲು, ರಾಜ್ಯ ಸರ್ಕಾರ ನಾನಾ ಕಾರ್ಯಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಸಂಬಂಧಿಸಿದ ಆರೋಗ್ಯಾಧಿಕಾರಿಗಳಿ ಸಲಹೆ ನೀಡಿ, ಜನರಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಶೀಘ್ರವೇ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.












Click it and Unblock the Notifications