ಹುಬ್ಬಳ್ಳಿ : ಸಿಎಂ ಪರಿಹಾರ ನಿಧಿಗೆ ಹಣ ಹಾಕಿ ರೈತರ ಪ್ರತಿಭಟನೆ
ಹುಬ್ಬಳ್ಳಿ, ಮಾರ್ಚ್ 07 : ಮಹದಾಯಿ ಹೋರಾಟಗಾರರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಸಾವಿರ ರೂ. ಹಣವನ್ನು ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮಹದಾಯಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಒಂದೇ ಒಂದು ರೂ. ನೀಡದೆ ಮಹದಾಯಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನಗೊಂಡ ಹೋರಾಟಗಾರರು ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇರಬಹುದೆಂದು 10 ಸಾವಿರ ರೂ. ಜಮಾ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ನಾಲ್ವರು ಸಂಸದರ ಬ್ಯಾಂಕ್ ಖಾತೆಗೆ ತಲಾ 5 ಸಾವಿರ ರೂ. ಹಣವನ್ನು ಹಾಕುವ ಮೂಲಕ ಕೇಂದ್ರ ಸರ್ಕಾರದ ಬಗ್ಗೆಯೂ ಅಸಮಾಧಾನವನ್ನು ಹೊರಹಾಕಿದ್ದಾರೆ.

ರೈತಾ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ್ ಸೋಬರದಮಠ ಅವರು ಈ ಕುರಿತು ಮಾತನಾಡಿದ್ದಾರೆ. 'ಮಹದಾಯಿ ಯೋಜನೆಗೆ 2 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಕುಮಾರಸ್ವಾಮಿ ಅವರನ್ನು ಭೇಟಿ ನೀಡಿ ಒತ್ತಾಯಿಸಿದ್ದೆವು' ಎಂದು ಹೇಳಿದರು.
'ಬಜೆಟ್ನಲ್ಲಿ ಒಂದೇ ಒಂದು ರೂಪಾಯಿ ಅನುದಾನವನ್ನು ನೀಡದೇ ಮಹದಾಯಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ಪ್ರತಿಭಟನೆ ಮಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಜಮೆ ಮಾಡಿದ್ದೇವೆ' ಎಂದರು.
'ಗದಗ, ಧಾರವಾಡ, ಬೆಳಗಾವಿ ಹಾಗೂ ಹಾವೇರಿ ಸಂಸದರಿಗೆ ರೈತರ ಹಾಗೂ ಜನಕ್ಕೆ ಅಗತ್ಯವಿರುವ ಕುಡಿಯುವ ನೀರಿನ ಕೆಲಸ ಮಾಡಲು ಹಣದ ಕೊರತೆ ಇರಬಹುದು ಅದಕ್ಕಾಗಿ ಅವರ ಖಾತೆಗೆ ಸ್ವಲ್ಪ ಮಟ್ಟಿನ ಹಣ ಜಮೆ ಮಾಡಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ' ಎಂದು ತಿಳಿಸಿದರು.












Click it and Unblock the Notifications