ನರೇಂದ್ರಸ್ವಾಮಿ ದಲಿತ ವಿರೋಧಿ ನೀತಿಗೆ ಮಾದಿಗ ಸಮಾಜ ಖಂಡನೆ
ದಲಿತ ಸಮುದಾಯದಲ್ಲಿ ವಿಷದ ಬೀಜ ಬಿತ್ತಿ ಒಡಕು ಮೂಡಿಸಲು ಪ್ರಯತ್ನಿಸುತ್ತಿರುವ ಶಾಸಕ ನರೇಂದ್ರಸ್ವಾಮಿ ಹೇಳಿಕೆಯನ್ನು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ವಿಜಯ ಗುಂಟ್ರಾಳ ಹೇಳಿದರು.
ಹುಬ್ಬಳ್ಳಿ, ನವೆಂಬರ್, 27: ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ದಲಿತರಲ್ಲಿ ವಿಷ ಬಿತ್ತುವ ಹೇಳಿಕೆ, ಸಂವಿಧಾನ ವಿರೋಧಿ ನೀತಿಯನ್ನು ಕರ್ನಾಟಕ ರಾಜ್ಯ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ, ಪೌರ ಕಾರ್ಮಿಕರ ಸಂಘಟನೆಗಳು ಖಂಡಿಸುತ್ತವೆ ಎಂದು ವಿಜಯ ಗುಂಟ್ರಾಳ ತಿಳಿಸಿದರು.
ಸ್ಥಳೀಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಬದ್ಧವಾದ ಒಳ ಮೀಸಲಾತಿ ಹಂಚಿಕೆ ಮತ್ತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವೈಜ್ಞಾನಿಕ ವರದಿಯನ್ನು ವಿರೋಧಿಸುವ ಹಾಗೂ ಬೇಡ ಎನ್ನುವ ಹಕ್ಕು ನರೇಂದ್ರಸ್ವಾಮಿಗೆ ಇಲ್ಲ.

ದಲಿತರಲ್ಲಿ ಇತರೇ ಜಾತಿಯ ಶಾಸಕರಿಗೆ ತಪ್ಪು ಮಾಹಿತಿ ನೀಡಿ, ಅವರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತರಾದ ಒಬ್ಬ ಶಾಸಕ ಎಂಬುವುದನ್ನು ಮರೆತು ಗುಂಪು ಕಟ್ಟಿ ಗೊಂದಲ ಸೃಷ್ಟಿಸುತ್ತಿರುವುದಲ್ಲದೇ, ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿ ಗೂಂಡಾ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರೂ ಸಹ ತಮ್ಮ ನ್ಯಾಯಸಮ್ಮತವಾದ ಹಕ್ಕು ಕೇಳಲು ಸರ್ವ ಸ್ವತಂತ್ರರು. ಆದರೆ, ಮತ್ತೊಬ್ಬರಿಗೆ ಸಿಗಬೇಕಾದ ಸಂವಿಧಾನ ಬದ್ಧವಾದ ಹಕ್ಕು ವಿರೋಧಿಸುವ ಹಾಗೂ ಬೇಡ ಎನ್ನುವ ಹಕ್ಕು ಯಾರಿಗೂ ಇಲ್ಲ. ಶೋಷಿತರಿಗೆ ನ್ಯಾಯ ದೊರಕಿಸಿಕೊಡುವುದು ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರದ ಪ್ರಧಾನ ಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ ಎಂದರು.
ಡಿಸೆಂಬರ್, 11 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶವು ಯಾವುದೇ ಪಕ್ಷ, ಜಾತಿ ಅಥವಾ ಧರ್ಮದ ವಿರುದ್ಧವಲ್ಲ. ಮಾದಿಗ ಸಮುದಾಯ ಹಕ್ಕೋತ್ತಾಯವೇ ನಮ್ಮ ಮೂಲ ಉದ್ದೇಶ. ಈ ಸಮಾವೇಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಯಶಸ್ವಿಯಾಗಿ ನೆರವೇರಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ ಪೆರೂರ, ಪರಶುರಾಮ ಪೂಜಾರ, ಲೋಕಮಾನ್ಯ ರಾಮದತ್ತ, ವೆಂಕಟೇಶ ಸಗಬಾಲ್, ರಂಗನಾಯಕ ತಪೇಲಾ, ಹನುಮಂತಪ್ಪ ಮಾಲಪಲ್ಲಿ, ಪರಶುರಾಮ ಕೊದಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications